ಚಾಮರಾಜನಗರ: ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷವು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಕಂದಹಳ್ಳಿ ಮಹೇಶ್ ಅವರನ್ನು ಆಯ್ಕೆ ಮಾಡಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಆರ್ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಎಂ.ರವಿಕುಮಾರ್, ‘ರಾಜ್ಯದ 28 ಕ್ಷೇತ್ರಗಳಲ್ಲೂ ಪಕ್ಷವು ಸ್ಪರ್ಧಿಸಲಿದೆ. ಚಾಮರಾಜನಗರದಲ್ಲಿ ಕಂದಹಳ್ಳಿ ಮಹೇಶ್ ಅವರು ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಐವರ ಸಮಿತಿಯು ಹಲವರ ಸಂದರ್ಶನ ನಡೆಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ’ ಎಂದರು.
ಈಗ ರಾಜಕೀಯ ಪಕ್ಷಗಳು ಕುಟುಂಬ ರಾಜಕಾರಣದಲ್ಲಿ ತೊಡಗಿವೆ. ನಾವು ಜನ ಸಾಮಾನ್ಯರಿಗೆ ಟಿಕೆಟ್ ಕೊಟ್ಟಿದ್ದೇವೆ. ಮಹೇಶ್ ಅವರು ರಾಜ್ಯ, ಭಾಷೆ ನೆಲ ಜಲದ ಬಗ್ಗೆ ಕಾಳಜಿ ಹೊಂದಿದ್ದಾರೆ. ಹೋರಾಟದ ಮನೋಭಾವ ಅವರಿಗಿದೆ’ ಎಂದರು.
‘ಪಕ್ಷವು ಹಣ, ಹೆಂಡ ಹಂಚದೆ ಚುನಾವಣೆಯನ್ನು ಎದುರಿಸಲಿದೆ. ಮತದಾರರು ಪಕ್ಷವನ್ನು ಬೆಂಬಲಿಸಬೇಕು’ ಎಂದು ರವಿಕುಮಾರ್ ಮನವಿ ಮಾಡಿದರು.
ಅಭ್ಯರ್ಥಿ ಕಂದಹಳ್ಳಿ ಮಹೇಶ್ ಮಾತನಾಡಿ, ‘ಕೆಆರ್ಎಸ್ ಪಕ್ಷವು ಚಾಮರಾಜನಗರ ಕ್ಷೇತ್ರದಿಂದ ಜನ ಸಾಮಾನ್ಯನಾದ ನನಗೆ ಸ್ಪರ್ಧಿಸಲು ಅವಕಾಶ ನೀಡಿದೆ. ರಾಜ್ಯದ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಪಕ್ಷವು ಪಾರದರ್ಶಕವಾಗಿ ಸಂದರ್ಶನದ ಮೂಲಕ ನನ್ನನ್ನು ಆಯ್ಕೆ ಮಾಡಿದೆ. ಭ್ರಷ್ಟಾಚಾರದ ವಿರುದ್ಧ ಪಕ್ಷ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು, ಎಲ್ಲರೂ ನನ್ನನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಉಪಾಧ್ಯಕ್ಷ ಸೈಯದ್ ಸಮೀ, ಯಳಂದೂರು ತಾಲ್ಲೂಕು ಅಧ್ಯಕ್ಷ ವೈ.ಕೆ.ಮೋಳೆ ರಂಗರಾಜು, ಪದಾಧಿಕಾರಿಗಳಾದ ರವೀಂದ್ರ, ನಿಸ್ವಾನ್, ಮುಬಾರಕ್ ಭಾಗವಹಿಸಿದ್ದರು.