ಕೊಳ್ಳೇಗಾಲ: ನಗರ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಜೂಜಾಡುತ್ತಿರುವರ ಬೆನ್ನು ಬಿದ್ದಿರುವ ಪೊಲೀಸರು, ಜೂಜು ಅಡ್ಡೆಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸುತ್ತಿದ್ದಾರೆ.
‘ಪ್ರಜಾವಾಣಿ’ಯ ಶುಕ್ರವಾರದ (ಮೇ 27) ಸಂಚಿಕೆಯಲ್ಲಿ ‘ಕೊಳ್ಳೇಗಾಲ: ಜೂಜಾಟ ಅವ್ಯಾಹತ’ ಎಂಬ ತಲೆಬರಹದ ಅಡಿಯಲ್ಲಿ ವಿಶೇಷ ವರದಿ ಪ್ರಕಟವಾದ ಬಳಿಕ ಪೊಲೀಸರು ಕಾರ್ಯಾಚರಣೆ ಬಿರುಸು ಗೊಳಿಸಿದ್ದಾರೆ. 26ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಅವರ ಪ್ರತಿಕ್ರಿಯೆ ಪಡೆದ ನಂತರ, ಅದೇ ದಿನ ರಾತ್ರಿ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದರು.
ಶುಕ್ರವಾರ ಸಂಜೆ ತಾಲ್ಲೂಕಿನ ಸಿಂಗನಲ್ಲೂರು ಗ್ರಾಮದ ಮಹಾಕಾಳಿ ದೇವಸ್ಥಾನದ ಬಳಿ ಅಕ್ರಮವಾಗಿ ಜೂಜಾಡುತ್ತಿದ್ದ ನಾಲ್ವರನ್ನು ಚಾಮರಾಜನಗರದ ಸೈಬರ್, ಆರ್ಥಿಕ ಅಪರಾಧ ಹಾಗೂ ಮಾದಕ ದ್ರವ್ಯ ನಿಗ್ರಹ ಘಟಕ (ಸಿಇಎನ್) ಪೊಲೀಸರು ಬಂಧಿಸಿದ್ದಾರೆ.ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ರಾಜು, ದೊಡ್ಡಿಂದುವಾಡಿ ಗ್ರಾಮದ ನವೀನ್, ಕೊಳ್ಳೇಗಾಲದ ಶಿವರುದ್ರಪ್ಪ, ಸಿಂಗನಲ್ಲೂರು ಗ್ರಾಮದ ರಾಜು ಬಂಧಿತ ಆರೋಪಿಗಳು. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ₹41,500 ನಗದನ್ನು ವಶಕ್ಕೆ ಪಡೆದಿದ್ದಾರೆ.
ಶನಿವಾರ ತಾಲ್ಲೂಕಿನ ಮತ್ತೀಪುರ ಗ್ರಾಮದಲ್ಲಿ ಜೂಜಾಡುತ್ತಿದ್ದ ಏಳು ಮಂದಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.ಗ್ರಾಮದ ಕೆಂಪರಾಜು, ಚಿಕ್ಕಮಾದಯ್ಯ, ದೇವರಾಜು, ಮನು, ವಿನೋದ್ ರಾಜ್, ಸೋಮಣ್ಣ, ರಾಜಶೇಖರ್ ಬಂಧಿತರು. ಅವರ ಬಳಿಯಿಂದ ₹4,200 ನಗದನ್ನು ವಶಪಡಿಸಿಕೊಂಡಿದ್ದಾರೆ.