ಚಾಮರಾಜನಗರ/ಸಂತೇಮರಹಳ್ಳಿ: ಮೇ 1ರ ನಂತರ ಜಿಲ್ಲೆಯಾದ್ಯಂತ ಸುರಿದ ಮಳೆಗೆ ವಿವಿಧ ತಾಲ್ಲೂಕುಗಳಲ್ಲಿ ನಷ್ಟ ಸಂಭವಿಸಿದೆ.
ಜಿಲ್ಲಾಡಳಿತವು ಅಂದಾಜು ನಷ್ಟದ ಪ್ರಮಾಣವನ್ನು ಲೆಕ್ಕಹಾಕಿದ್ದು, ಮೇ ಮೊದಲ ವಾರದಲ್ಲಿ ಒಂದು ಜೀವ ಹಾನಿ ಸಂಭವಿಸಿದೆ. 62 ಮನೆಗಳಿಗೆ ಹಾನಿಯಾಗಿದೆ. ತೋಟಗಾರಿಕೆ ಮತ್ತು ಕೃಷಿ ಬೆಳೆ ಸೇರಿದಂತೆ 72.73 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. 3 ಜಾನುವಾರುಗಳು ಮೃತಪಟ್ಟಿವೆ.
ಚಂದಕವಾಡಿ ಹೋಬಳಿ ಕುಳ್ಳೂರಿ ನಲ್ಲಿ ಮಳೆಗೆ ಗೋಡೆ ಕುಸಿದು ಮಹದೇವ ಎಂಬುವರು ಮೃತಪಟ್ಟಿದ್ದರು. ತಾಲ್ಲೂಕು ಆಡಳಿತ ಅವರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ವಿತರಿಸಿದೆ.
ಮೇ 1ರಿಂದ 18ರವರೆಗೆ ಜಿಲ್ಲೆಯಲ್ಲಿ 18.1 ಸೆಂ.ಮೀ ಮಳೆ ಬಿದ್ದಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 8.6 ಸೆಂ.ಮೀ ಮಳೆಯಾಗುತ್ತದೆ. ಶೇಕಡವಾರು ಲೆಕ್ಕಾಚಾರದಲ್ಲಿ 167ರಷ್ಟು ಹೆಚ್ಚು ಮಳೆ ಬಿದ್ದಿದೆ.
ಮಳೆಯೊಂದಿಗೆ ತೀವ್ರವಾಗಿ ಗಾಳಿ ಬೀಸಿದ್ದರಿಂದ ಹಾನಿ ಪ್ರಮಾಣದಲ್ಲಿ ಹೆಚ್ಚಾಗಿದೆ. ತೋಟಗಾರಿಕೆ ಬೆಳೆಗಳ ಪೈಕಿ ಬಾಳೆ ಬೆಳೆಗೆ ಹೆಚ್ಚು ಹಾನಿಯಾಗಿದೆ. ಈರುಳ್ಳಿ ಬೆಳೆಗೂ ತೊಂದರೆ ಯಾಗಿದೆ.
ಜಿಲ್ಲಾಡಳಿತದ ಮಾಹಿತಿ ಪ್ರಕಾರ 62 ಮನೆಗಳಿಗೆ ಹಾನಿಯಾಗಿದೆ. ಅಂದಾಜು ₹ 10.92 ಲಕ್ಷ ನಷ್ಟವಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿಯೇ 30 ಮನೆಗಳಿಗೆ ಹಾನಿಯಾಗಿದೆ. ತಾಲ್ಲೂಕಿನ 10 ಮಂದಿ ಮಾಲೀಕರಿಗೆ ₹ 52 ಸಾವಿರ ಪರಿಹಾರ ನೀಡಲಾಗಿದೆ.
ಎರಡು ವಾರದ ಅವಧಿಯಲ್ಲಿ 59.31 ಹೆಕ್ಟೇರ್ಗಳಷ್ಟು ತೋಟಗಾರಿಕೆ ಬೆಳೆ ನಷ್ಟವಾಗಿದೆ. ಎಸ್ಡಿಆರ್ಎಫ್, ಎನ್ಡಿಆರ್ಎಫ್ ಅಂದಾಜಿನ ಪ್ರಕಾರ ₹ 13,74,850 ನಷ್ಟವಾಗಿದೆ. ಆದರೆ ಈಗ ಬಾಳೆಗೆ ಉತ್ತಮ ಬೆಲೆ ಇದ್ದು, ರೈತರಿಗೆ ಕೋಟ್ಯಂ ತರ ರೂಪಾಯಿ ನಷ್ಟವಾಗಿದೆ ಎನ್ನುತ್ತಾರೆ ಬೆಳೆಗಾರರು.
12.4 ಹೆಕ್ಟೇರ್ ಪ್ರದೇಶದಲ್ಲಿ ಆಗಿರುವ ನಷ್ಟಕ್ಕೆ ₹ 1.51 ಲಕ್ಷ ಪರಿಹಾರ ವಿತರಿಸಲಾಗಿದೆ.
ತೋಟಗಾರಿಕೆ ಇಲಾಖೆಯು ಏ.20ರಿಂದ ಮೇ 11ರವರೆಗಿನ ಅಂಕಿ–ಅಂಶ ನೀಡಿದ್ದು, 99.21 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಈ ಪೈಕಿ 91 ಹೆಕ್ಟೇರ್ ಬಾಳೆಯಾಗಿದ್ದರೆ; 8.21 ಹೆಕ್ಟೇರ್ ಈರುಳ್ಳಿ. ಒಟ್ಟಾರೆ 219 ರೈತರು ನಷ್ಟ ಅನುಭವಿಸಿದ್ದಾರೆ. ಈಗಿನ ಮಾರುಕಟ್ಟೆ ಬೆಲೆಯಲ್ಲಿ ಲೆಕ್ಕ ಹಾಕಿದರೆ ಇದರ ಮೌಲ್ಯ ₹ 22 ಕೋಟಿಗೂ ಹೆಚ್ಚು ಎನ್ನುತ್ತಾರೆ ಅಧಿಕಾರಿಗಳು.
13.42 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಕೃಷಿ ಬೆಳೆಗಳಿಗೆ ಹಾನಿಯಾಗಿದ್ದು, ಹನೂರು ತಾಲ್ಲೂಕಿನಲ್ಲಿ ಹೆಚ್ಚು ಹಾನಿ ಸಂಭವಿಸಿದೆ. ಅಲ್ಲಿ 11.42 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಸಂಭವಿಸಿದೆ. ಒಟ್ಟು ₹ 3.73 ಲಕ್ಷದಷ್ಟು ನಷ್ಟವುಂಟಾಗಿದೆ.
ಕಡಿಮೆಯಾದ ಮಳೆ: ಇಳಿಯದ ನೀರು
2 ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ, ಜಮೀನುಗಳಲ್ಲಿ ನಿಂತ ನೀರು ಬಸಿದು ಹೋಗಿಲ್ಲ. ಕೆರೆ ಕೋಡಿ ಬಿದ್ದ ಪ್ರದೇಶದಲ್ಲಿನ ಜಮೀನಿನಲ್ಲಿ ಈಗಲೂ ನೀರು ನಿಂತಿದೆ.
ಸಂತೇಮರಹಳ್ಳಿಹೋಬಳಿಯ ಹೊಂಗನೂರು ಹಿರಿಕೆರೆ ಕೋಡಿ ಬಿದ್ದು ಜಮೀನುಗಳಿಗೆ ನೀರು ನುಗ್ಗಿದೆ. ಕಟಾವು ಹಂತಕ್ಕೆ ಬಂದಿರುವ ಭತ್ತದ ಗದ್ದೆಯಲ್ಲಿ ನೀರು ತುಂಬಿದೆ. ಕಬ್ಬು, ಬಾಳೆ ಬೆಳೆಗೂ ಇದೇ ಪರಿಸ್ಥಿತಿಯಾಗಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಹೆಸರು, ಉದ್ದು, ಅಲಸಂದೆ ಬೆಳೆಗಳು ಪೈರು ಬರುವ ಮುನ್ನವೇ ನೀರು ನುಗ್ಗಿರುವುದರಿಂದ ಬಿತ್ತನೆ ಬೀಜಗಳು ಕೊಳೆಯಲಾರಂಭಿಸಿವೆ.
ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ನೀರು ತುಂಬಿರುವ ಫಸಲು ಜಮೀನುಗಳನ್ನು ಪರಿಶೀಲನೆ ನಡೆಸಿ ಪರಿಹಾರವಾಗಿ ರೈತರಿಗೆ ನಷ್ಟ ತುಂಬಿಸಿಕೊಡಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.
ಸಂತೇಮರಹಳ್ಳಿಸಮೀಪದ ತೆಳ್ಳನೂರಿನಲ್ಲಿ ಮಳೆಗೆ ಮನೆಯೊಂದರ ಗೋಡೆ ಬುಧವಾರ ಕುಸಿದು ಬಿದ್ದಿದೆ.
ಗ್ರಾಮದ ಮಹದೇವಮ್ಮ ಎಂಬುವರಿಗೆ ಸೇರಿದ ವಾಸದ ಮನೆ ಮಳೆಗೆ ಕುಸಿದು ಬಿದ್ದಿದ್ದು, ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ರೇವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೋಡಿ ಬಿದ್ದ ಚಿಕ್ಕಹೊಳೆ ಜಲಾಶಯ
ಚಾಮರಾಜನಗರ ತಾಲ್ಲೂಕಿನ ಅವಳಿ ಜಲಾಶಯಗಳಲ್ಲಿ ಒಂದಾದ ಚಿಕ್ಕಹೊಳೆ ಜಲಾಶಯ ಬುಧವಾರ ರಾತ್ರಿ ಕೋಡಿ ಬಿದ್ದಿದೆ. ಮುಂಗಾರು ಆರಂಭಕ್ಕೂ ಮುನ್ನ ಜಲಾಶಯ ಭರ್ತಿಯಾಗಿರುವುದು ವಿಶೇಷ. ಹಿಂಗಾರು ಅವಧಿಯಲ್ಲಿ ಈ ಜಲಾಶಯಕ್ಕೆ ನೀರು ಹರಿದುಬರುತ್ತದೆ.
ಕಳೆದ ವರ್ಷದ ನವೆಂಬರ್ನಲ್ಲಿ ಜಲಾಶಯ ಭರ್ತಿಯಾಗಿ ಕೋಡಿ ಹರಿದಿತ್ತು. ಆ ಬಳಿಕವೂ ಅಣೆಕಟ್ಟೆಯಲ್ಲಿ ಶೇ 50ರಷ್ಟು ನೀರಿತ್ತು. ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದರಿಂದ ಜಲಾಶಯ ಭರ್ತಿಯಾಗಿದೆ.
100 ಕ್ಯುಸೆಕ್ ನೀರು ಹೊರ ಹೋಗುತ್ತಿದೆ. ಬಂಡಿಗೆರೆಗೆ ನೀರು ಹರಿಸಲಾಗುತ್ತಿದೆ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ತಿಳಿಸಿದರು.
ಮೂರು ಅಡಿ ಬಾಕಿ: ಸುವರ್ಣಾವತಿ ಜಲಾಶಯ ಭರ್ತಿಯಾಗಲು ಇನ್ನು ಮೂರು ಅಡಿಗಳಷ್ಟೇ ಬಾಕಿ ಇದೆ ಎಂದು ಅವರು ತಿಳಿಸಿದ್ದಾರೆ.
* ಮಳೆಯಿಂದಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮನೆ, ಬೆಳೆ ಹಾನಿ ಸಂಭವಿಸಿದೆ. ಹಾನಿ ಪ್ರಮಾಣವನ್ನು ಅಂದಾಜಿಸಲಾಗುತ್ತಿದೆ. ನಿಯಮಗಳ ಅನುಸಾರ ಪರಿಹಾರ ನೀಡಲಾಗುವುದು
–ಚಾರುಲತಾ ಸೋಮಲ್, ಜಿಲ್ಲಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.