ಯಳಂದೂರು: ಪಟ್ಟಣದಿಂದ ಬಿಳಿಗಿರಿರಂಗನಬೆಟ್ಟ ಮತ್ತು ವಿವಿಧ ದೇಗುಲಗಳತ್ತ ತೆರಳುವ ಭಕ್ತರು ಬಸ್ ಇಡಿಯಲು ಶನಿವಾರ ಮುಗಿಬಿದ್ದರು. ವಾಹನಗಳು ಸಂಚರಿಸುವ ಸಮಯದಲ್ಲಿ ಬಸ್ ಏರಲು ಪ್ರಾಯಾಸಪಟ್ಟರು. ನಿರ್ವಾಹಕರು ಪ್ರಯಾಣಿಕರನ್ನು ಸಂಭಾಳಿಸಲು ಹೆಣಗಾಡುತ್ತಿದ್ದ ದೃಶ್ಯ ಕಂಡುಬಂದಿತು.
ವಾರದ ದಿನಗಳಲ್ಲಿ ಭಕ್ತರು ರಂಗನಾಥ ಮತ್ತು ವೆಂಕಟೇಶ್ವರನ ದರ್ಶನಕ್ಕೆ ತೆರಳುತ್ತಾರೆ. ಸ್ಥಳೀಯರು ಮತ್ತು ವಿವಿಧ ಜಿಲ್ಲೆಗಳ ಭಕ್ತರು ವಿವಿಧ ಸೇವೆಗಳನ್ನು ಸಲ್ಲಿಸುವ ವಾಡಿಕೆ ಇದೆ. ನಾಲ್ಕನೆ ಶನಿವಾರ ರಜಾದಿನ ಆಗಿದ್ದು, ಹೆಚ್ಚಿನ ಪ್ರವಾಸಿಗರು ಬಿಆರ್ಟಿಯತ್ತ ಭೇಟಿ ನೀಡುತ್ತಾರೆ.
ಬಸ್ ನಿಲ್ದಾಣದ ಸುತ್ತಮುತ್ತ ಹೆಚ್ಚಿನ ಜನ ದಟ್ಟಣೆ ಇತ್ತು. ಬಹುತೇಕ ಸ್ತ್ರೀಯರು ಸರ್ಕಾರಿ ಬಸ್ ಏರುವ ಧಾವಂತ ಕಂಡುಬಂದಿತು. ನೂಕು ನುಗ್ಗಲ ನಡುವೆ ನಿರ್ವಾಹಕರು ಟಿಕೆಟ್ ನೀಡಲು ಪರದಾಡಿದರು. ಕೆಲವರು ಪ್ರಯಾಣಿಸುವ ಬಸ್ಅನ್ನು ಬಿಡದೆ ಏರಿದರು. ಕೆಎಸ್ಆರ್ಟಿಸಿ ಸಿಬ್ಬಂದಿ ಸುಗಮ ಸಂಚಾರ ವ್ಯವಸ್ಥೆ ಮಾಡಲು ಪ್ರಯತ್ನಿಸಿದರು.
ಬೆಟ್ಟ ಮತ್ತು ಸುತ್ತಮುತ್ತಲ ದೇವಾಲಯಗಳಿಗೆ ಹೆಚ್ಚಿನ ಬಸ್ ಸಂಚರಿಸುತ್ತವೆ. ಭಕ್ತರು ತಾಳ್ಮೆಯಿಂದ ಬಸ್ ಇಡಿಯಬೇಕು. ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣೀಕರು ಬಸ್ ಏರಿದರೆ, ಬೆಟ್ಟದ ತಿರುವುಗಳಲ್ಲಿ ಬಸ್ಅನ್ನು ಸುರಕ್ಷಿತವಾಗಿ ಚಲಾಯಿಸುವುದು ಚಾಲಕರಿಗೆ ತ್ರಾಸವಾಗಲಿದೆ ಎಂದು ಗುಂಬಳ್ಳಿ ಮಹೇಶ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.