ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ಯಾರೇಜ್’ ಸ್ವರೂಪ ಪಡೆದ ಠಾಣೆ!

ದಿನೇ ದಿನೇ ಗುಜರಿ ವಾಹನಗಳ ದಾಸ್ತಾನು ಕೇಂದ್ರವಾಗುತ್ತಿರುವ ನಗರ ಪೊಲೀಸ್ ಠಾಣೆ ಆವರಣ
Last Updated 27 ಡಿಸೆಂಬರ್ 2019, 10:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿವಿಧ ಪ್ರಕರಣಗಳಲ್ಲಿ ಪೊಲೀಸರು ಜಪ್ತಿ ಮಾಡಿದ ವಾಹನಗಳು ಸಕಾಲಕ್ಕೆ ವಿಲೇವಾರಿಯಾಗದ ಕಾರಣ ನಗರ ಪೊಲೀಸ್ ಠಾಣೆಯ ಆವರಣ ದಿನೇ ದಿನೇ ಗುಜರಿ ವಾಹನಗಳ ದಾಸ್ತಾನು ಕೇಂದ್ರವಾಗುತ್ತಿದೆ. ಠಾಣೆಯ ಆವರಣದಲ್ಲಿ ಕಾಲಿಟ್ಟರೆ ಸಾಕು ಸಾಲಾಗಿ ನಿಂತು ಧೂಳು ತಿನ್ನುತ್ತ, ತುಕ್ಕು ಹಿಡಿಯುತ್ತಿರುವ ವಾಹನಗಳು ಗಮನ ಸೆಳೆಯುತ್ತವೆ.

ಇಲ್ಲಿ ಸ್ಥಳಾವಕಾಶ ವಿಶಾಲವಾಗಿರುವ ಕಾರಣಕ್ಕೆ ನಗರ ಠಾಣೆ ಮಾತ್ರವಲ್ಲದೆ, ಸಂಚಾರ ಮತ್ತು ಗ್ರಾಮಾಂತರ ಠಾಣೆಗಳಿಗೆ ಸಂಬಂಧಿಸಿದ ವಾಹನಗಳನ್ನು ಇಲ್ಲೇ ತಂದು ನಿಲ್ಲಿಸಲಾಗುತ್ತದೆ. ಹೀಗಾಗಿ, ಠಾಣೆಗೆ ಹೋದರೆ ಕಣ್ಣಿಗೆ ಮೊದಲು ರಾರಾಜಿಸುವ ತುಕ್ಕು ಹಿಡಿದ ಬೈಕ್, ಆಟೊ, ಸೈಕಲ್, ಟಾಟಾ ಸುಮೋ, ಲಾರಿ, ಟೆಂಪೋ , ಟ್ರ್ಯಾಕ್ಟರ್.. ಹೀಗೆ ಹತ್ತಾರು ಬಗೆಯ ವಾಹನಗಳು ಗ್ಯಾರೇಜ್ ನೆನಪಿಸುತ್ತವೆ ಎನ್ನುತ್ತಾರೆ ಸಾರ್ವಜನಿಕರು.

ಜೂಜಾಟ, ಕಳ್ಳತನ, ಅಕ್ರಮ ಮರಳು ಸಾಗಣೆ, ರಸ್ತೆ ಅಪಘಾತ, ಸಂಚಾರ ನಿಯಮಗಳ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ನಿಯಮಾನುಸಾರ ಕಾಲಕಾಲಕ್ಕೆ ವಿಲೇವಾರಿ ಮಾಡಬೇಕು. ಕೆಲ ಪ್ರಕರಣಗಳಲ್ಲಿ ಮಾಲೀಕರಿಂದ ದಂಡ ಪಾವತಿಸಿಕೊಂಡು ವಾಹನಗಳನ್ನು ಹಸ್ತಾಂತರಿಸಬೇಕು. ಇನ್ನು ಕೆಲ ಪ್ರಕರಣಗಳಲ್ಲಿ ವಾಹನಗಳನ್ನು ಆರ್‌ಟಿಒ ಅಧಿಕಾರಿಗಳಿಂದ ಪರಿಶೀಲನೆ ಮಾಡಿಸಿ, ಮೌಲ್ಯ ನಿಗದಿ ಪಡಿಸಬೇಕು. ಅಂತಹ ವಾಹನಗಳನ್ನು ಅಧಿಕಾರಿಗಳು ಹರಾಜಿನ ಮೂಲಕ ಮಾರಾಟ ಮಾಡಬೇಕು.

ಆದರೆ, ಅನೇಕ ಪ್ರಕರಣಗಳಲ್ಲಿ ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಪಡೆಯಲು ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಕೆಲವು ವಾಹನಗಳಿಗೆ ನೋಂದಣಿ ಇಲ್ಲ. ಹಲವು ವಾಹನಗಳ ಚಾಲಕರಿಗೆ ಹಾಗೂ ಮಾಲೀಕರಿಗೆ ಚಾಲನಾ ಪರವಾನಗಿ, ವಿಮೆ ಇಲ್ಲ. ಹೀಗಾಗಿ, ವಾಹನಗಳನ್ನು ವಾಪಸ್‌ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಹೊತ್ತಿಗೆ ಜಪ್ತಿ ಮಾಡಿದ ತುಕ್ಕಿನಿಂದ ತನ್ನ ಮೂಲ ಸ್ವರೂಪ ಕಳೆದುಕೊಂಡು ಬಳಸಲು ಬಾರದ ಸ್ಥಿತಿಗೆ ತಲುವ ಕಾರಣಕ್ಕೆ ಮಾಲೀಕರು ಅಂತಹ ವಾಹನ ಹಿಂಪಡೆಯುವ ಗೋಜಿಗೆ ಹೋಗುವುದಿಲ್ಲ ಎನ್ನಲಾಗಿದೆ.

‘ಅನೇಕ ಪ್ರಕರಣಗಳಲ್ಲಿ ವಾಹನ ಕಳೆದುಕೊಂಡವರು ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಪೊಲೀಸರುಹಗಲಿರುಳು ಶ್ರಮವಹಿಸಿ ಕಳುವಾದ ವಾಹನ ಹುಡುಕಿ ತಂದರೆ, ಮಾಲೀಕರು ಠಾಣೆಯತ್ತಲೂ ಸುಳಿಯುವುದಿಲ್ಲ. ಹೀಗಾಗಿಯೂ ಸಾಕಷ್ಟು ವಾಹನಗಳು ಠಾಣೆಯ ಆವರಣದಲ್ಲೇ ಉಳಿದಿವೆ. ವಾಹನಗಳ ವಾರಸುದಾರರ ಅಸಡ್ಡೆ ಧೋರಣೆಯಿಂದಾಗಿ ಠಾಣೆ ಆವರಣದಲ್ಲಿ ತುಕ್ಕು ಹಿಡಿಯುತ್ತ ನಿಲ್ಲುವ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು.

‘ಜಪ್ತಿ, ಅಪಘಾತಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ಬಿಡಿಸಿಕೊಳ್ಳಬೇಕಾದರೆ ಪೊಲೀಸರು ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಾರೆ. ವಾಹನ ದಾಖಲೆ ಹೊಂದಿಸಲು ಓಡಾಟ, ಪೊಲೀಸರ ಹಣದ ಬೇಡಿಕೆಗೆ ಬೇಸತ್ತು ಕೆಲವರು ಹಳೆಯ ವಾಹನಗಳನ್ನು ಮರೆತು, ಹೊಸ ವಾಹನಗಳನ್ನು ಖರೀದಿಸುತ್ತಾರೆ. ಮಾಲೀಕರಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ ವಾಹನಗಳ ಬಿಡಿಭಾಗಗಳು ದಿನೇ ದಿನೇ ಕಳ್ಳರ ಪಾಲಾಗುವುದೇ ಹೆಚ್ಚು’ ಎಂದು ಎಂ.ಜಿ.ರಸ್ತೆ ನಿವಾಸಿ ಮೋಹನ್ ಹೇಳಿದರು.

ಜಪ್ತಿಯಾದ ವಾಹನಗಳ ಹರಾಜಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವರದಿ, ನ್ಯಾಯಾಲಯದ ಅನುಮತಿ ಬೇಕು. ಬಹುತೇಕ ಅಧಿಕಾರಿಗಳು ವಾಹನಗಳನ್ನು ಹರಾಜು ಪ್ರಕ್ರಿಯೆ ಬಗ್ಗೆ ಆಸಕ್ತಿ ತೋರುವುದಿಲ್ಲ. ಹೀಗಾಗಿ ಠಾಣೆಯ ಆವರಣದಲ್ಲಿ ತುಕ್ಕು ಹಿಡಿಯುವ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಪ್ರಜ್ಞಾವಂತರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT