ಗುಡಿಬಂಡೆ: ‘ಮುಖ್ಯರಸ್ತೆಯ ವಿಸ್ತರಣೆ ವೇಳೆ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ನಿವೇಶನ ಹಂಚಿಕೆಯಲ್ಲಿ ಮೊದಲ ಆದ್ಯತೆ ನೀಡಲಾಗುವುದು’ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣ ಪಂಚಾಯಿತಿಯಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ಈ ಹಿಂದೆ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ನಡೆಯುತ್ತಿತ್ತು. ಆದರೆ, ಪಟ್ಟಿಯಲ್ಲಿ ರಸ್ತೆ ವಿಸ್ತರಣೆ ವೇಳೆ ಮನೆ ಕಳೆದುಕೊಂಡ ಸಂತ್ರಸ್ತರ ಹೆಸರು ಇಲ್ಲ. ಹಾಲಿ ಪಟ್ಟಿಯನ್ನು ರದ್ದುಪಡಿಸಿ ಹೊಸದಾಗಿ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಬೇಕು ಎಂದರು.
ಗುಡಿಬಂಡೆ ಸರ್ವೆ ನಂ. 88ರಲ್ಲಿ 1.35 ಗುಂಟೆ ಜಮೀನಿನಲ್ಲಿ ಸುಮಾರು 55 ನಿವೇಶನ ಮತ್ತು ಪಲ್ಲೈಗಾರಹಳ್ಳಿಯ ಸರ್ವೆ ನಂ. 7ರಲ್ಲಿ 5 ಎಕರೆ ಜಮೀನು ಗುರುತಿಸಿ ಸುಮಾರು 70 ನಿವೇಶನಗಳನ್ನು ಅಭಿವೃದ್ಧಿಪಡಿಸಬೇಕು. ತಾಲ್ಲೂಕಿಗೆ ಹೆಚ್ಚುವರಿಯಾಗಿ 150 ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಅಧಿಕಾರಿಗಳು ಫಲಾನುಭವಿಗಳ ಪಟ್ಟಿ ನೀಡಿದ ಕೂಡಲೇ ಮನೆ ಹಂಚಿಕೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ಆಶ್ರಯ ಸಮಿತಿ ಸದಸ್ಯರಾದ ನವೀನ್ ಕುಮಾರ್ ಮತ್ತು ರವಿ ಮಾತನಾಡಿ, ತಾಲ್ಲೂಕಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಡುಬಡವರಿದ್ದು ಅವರಿಗೆ ವಾಜಪೇಯಿ ಆಶ್ರಯ ಯೋಜನೆಯಡಿ ನಿವೇಶನ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದರು.
ಪ.ಪಂ. ಮುಖ್ಯಾಧಿಕಾರಿ ಸಬಾ ಶಿರೀನ್ ಮಾತನಾಡಿ, ‘ನಾನು ಹೊಸದಾಗಿ ಬಂದಿದ್ದೇನೆ. ಎಂಟು ದಿನಗಳ ಕಾಲಾವಕಾಶ ನೀಡಿದರೆ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬಷೀರಾ ರಿಜ್ವಾನ್, ಜಿನ್ನಾರಾಜಯ್ಯ, ಜೆ.ಇ. ಚಕ್ರಪಾಣಿ, ಜಯರಾಮ್ ಇದ್ದರು.