ಗೌರಿಬಿದನೂರು: ತಾಲ್ಲೂಕಿನ ಅಲಕಾಪುರದ ಶ್ರೀಚನ್ನಸೋಮೇಶ್ವರ ದೇವಾಲಯದ ಆವರಣದಲ್ಲಿ ಶನಿವಾರ ಅಗ್ನಿಕುಂಡ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಧಾರ್ಮಿಕ ಕ್ಷೇತ್ರಗಳು ಜನರಿಗೆ ಭಕ್ತಿ ಮತ್ತು ಧಾರ್ಮಿಕ ಶಕ್ತಿ ಕರುಣಿಸುವ ಜತೆಗೆ ಶಾಂತಿಯ ಮನೋಭಾವ ಮೂಡಿಸುತ್ತವೆ. ಸುತ್ತಲಿನ ಗ್ರಾಮಗಳ ಜನರು ಭಕ್ತಿಪೂರ್ವಕವಾಗಿ ಭಾಗವಹಿಸಿ ತಮ್ಮಲ್ಲಿನ ಎಲ್ಲ ಕಷ್ಟಗಳನ್ನು ಮರೆತು ಸಂತೋಷದಿಂದ ಇರಲು ಸಾಧ್ಯವಾಗುತ್ತದೆ ಎಂದು ಜಿ.ಪಂ ಮಾಜಿ ಅಧ್ಯಕ್ಷ ಸಿ.ಆರ್. ನರಸಿಂಹಮೂರ್ತಿ ಹೇಳಿದರು.
ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್,ಬಸವರಾಜ ಮಹಾಮನಿ ಮತ್ತು ನರಸಿಂಹಜೋಶಿ ಅವರಿಂದ ದೇವಾಲಯದ ಆವರಣದಲ್ಲಿ ನಗೆಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು.
‘ಗ್ರಾಮೀಣ ಭಾಗದಲ್ಲಿ ನಡೆಯುವ ಹಾಸ್ಯ ಕಾರ್ಯಕ್ರಮಗಳು ಜನತೆಗೆ ಮನರಂಜನೆ ನೀಡುವ ಜತೆಗೆ ಅವರ ಕಷ್ಟಗಳನ್ನು ಮರೆತು ಸಂತೋಷದಿಂದ ಇರಲು ಸಹಕಾರಿಯಾಗುತ್ತವೆ. ಧಾರ್ಮಿಕ ಕ್ಷೇತ್ರದಲ್ಲಿ ನಡೆಯುವ ಇಂತಹ ಸಮಾರಂಭಗಳು ಜನರಲ್ಲಿನ ದ್ವೇಷ, ಅಸೂಯೆಯನ್ನು ದೂರ ಮಾಡಿ ಸಾಮರಸ್ಯದ ಕಡೆಗೆ ಕೊಂಡೊಯ್ಯುತ್ತವೆ’ ಎಂದು ಪ್ರಾಣೇಶ್ ಹೇಳಿದರು.
ಇದೇ ವೇಳೆ ಕಾರ್ಯಕ್ರಮದ ಆಯೋಜಕರಾದ ಕೆ. ಕೆಂಪರಾಜು ಗಣ್ಯರನ್ನು ಸನ್ಮಾನಿಸಿದರು. ಮುಖಂಡರಾದ ಪ್ರಭಾಕರ್, ರಾಮಕೃಷ್ಣ, ವೇದಲವೇಣಿ ರಾಮು, ಎಂ.ಎಸ್. ರಾಜಶೇಖರ್, ಎಚ್.ಎಲ್. ವೆಂಕಟೇಶ್, ರಂಗನಾಥಗೌಡ, ಕೃಷ್ಣೇಗೌಡ, ಅಶೋಕ್ ಉಪಸ್ಥಿತರಿದ್ದರು.