ಶಿಡ್ಲಘಟ್ಟ: ‘ಪುರುಷ ಪ್ರಧಾನವಾದ ಈ ಸಮಾಜದಲ್ಲಿ ಮಹಿಳೆಯೂ ಧೈರ್ಯವಾಗಿ ಸ್ವಾವಲಂಬಿಯಾಗಿ ಬದುಕಲು ಕಲಿಸಿಕೊಟ್ಟಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ಎಂದು ಹಿರಿಯ ಸಾಹಿತಿಗಳಾದ ಸ.ರಘುನಾಥ್ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನತಾಣ ಕಾರ್ಯಕ್ರಮದಡಿಯಲ್ಲಿ 31 ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಾಮಾಣಿಕತೆ ಹಾಗೂ ಲೆಕ್ಕಪತ್ರಗಳನ್ನು ಪಾರದರ್ಶಕವಾಗಿ ನೀಡುವ ಸಂಸ್ಥೆಯಿದ್ದರೆ ಅದು ಧರ್ಮಸ್ಥಳ. ಇಂತಹ ಸಂಸ್ಥೆಯಲ್ಲಿ ನೀಡುವ ಸೌಲಭ್ಯ ಉಪಯೋಗಿಸಿಕೊಂಡು ಸಮಾಜದಲ್ಲಿ ಆದರ್ಶಪ್ರಾಯರಾಗಿ ಬದುಕಿ’ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಕುಳಿತು ಶಿಕ್ಷಣ ಪಡೆಯುವ ತಂತ್ರಾಂಶ ಯೋಜನೆಯೇ ಈ ಜ್ಞಾನತಾಣ ಕಾರ್ಯಕ್ರಮ. ಅಂತರ್ಜಾಲದ ಮುಖಾಂತರ ತಮಗೆ ಬೇಕಾದ ಕೆಲಸಗಳನ್ನು ಮಾಡಿಕೊಳ್ಳುವ ಸಾಮರ್ಥ್ಯ ಗ್ರಾಮೀಣ ವಿದ್ಯಾರ್ಥಿಗಳಿಗೂ ಒದಗಿ ಬಂದಿದೆ. ಮನೆ ಪಾಠಗಳು ಕಣ್ಮರೆಯಾಗಿ ಮೊಬೈಲ್ ಪಾಠಗಳು ಆಕರ್ಷಣೆಯಾಗಿದೆ. ಆದರೂ ದುರ್ಬಲ ವರ್ಗದ ಕುಟುಂಬದ ಮಕ್ಕಳಿಗೆ ಈ ಸೌಲಭ್ಯವು ಕನಸಿನ ಮಾತು. ಆದರೆ ಈ ಅಂತರ್ಜಾಲ ಅಂತರವನ್ನು ಕಡಿಮೆ ಮಾಡುತ್ತಿದೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ತ್ಯಾಗರಾಜ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನಿರ್ದೇಶಕ ರವಿ ಕುಮಾರ್, ಹಣಕಾಸು ಪ್ರಬಂಧಕ ಕಿರಣ್, ಆಡಳಿತ ಪ್ರಬಂಧಕ ಚೈತ್ರಾ, ಮೇಲ್ವಿಚಾರಕಿ ಲಕ್ಷ್ಮಿ, ಕೃಷಿ ಮೇಲ್ವಿಚಾರಕ ಹರೀಶ್ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.