ಚಿಂತಾಮಣಿ: ತಾಲ್ಲೂಕಿನ ಕುರುಬೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಗರು ಜಯಭೇರಿ ಬಾರಿಸಿದ್ದಾರೆ.
ಜೆಡಿಎಸ್ ಶಾಸಕ ಕೃಷ್ಣಾರೆಡ್ಡಿ ಬೆಂಬಲಿಗರು ಮತ್ತು ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಬೆಂಬಲಿಗರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಎರಡು ಗುಂಪುಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಮನೆ ಮನೆಗೂ ತೆರಳಿ ಮತಯಾಚನೆ ಮಾಡಿದ್ದರು.
ಮತದಾನ ಶಾಂತಿಯುತವಾಗಿ ನಡೆಯಿತು. ಮತದಾರರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮತದಾನದ ನಂತರ ರಾತ್ರಿಯೇ ಮತಗಳ ಎಣಿಕೆ ನಡೆದು ಚುನಾವಣಾಧಿಕಾರಿ ಎಸ್. ಪ್ರದೀಪ್ ಫಲಿತಾಂಶ ಘೋಷಣೆ ಮಾಡಿದರು. ಒಟ್ಟು 12 ನಿರ್ದೇಶಕ ಸ್ಥಾನಗಳಲ್ಲಿ 10 ಜೆಡಿಎಸ್ ಬೆಂಬಲಿಗರು, 2 ಸ್ಥಾನಗಳು ಮಾಜಿ ಶಾಸಕರ ಗುಂಪಿನ ಪಾಲಾಗಿವೆ.
ಜಯಗಳಿಸಿದವರು: ನೇತಾಜಿಗೌಡ, ಎಂ. ಶಿವಾರೆಡ್ಡಿ, ಶ್ರೀನಿವಾಸಗೌಡ, ವಿಶ್ವನಾಥರೆಡ್ಡಿ, ಮುನಿವೆಂಕಟಪ್ಪ, ಕೆ.ಎಂ. ನಟರಾಜ್, ಗಂಗಮ್ಮ, ಚಂದ್ರಕಲಾ, ಎ.ಜಿ. ಕೃಷ್ಣಪ್ಪ, ಕೆ.ಎಂ. ಕೃಷ್ಣಪ್ಪ, ಕೆ.ಎಂ. ಮಂಜುನಾಥ, ಎಂ. ವೆಂಕಟರೆಡ್ಡಿ.