ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಒಂದೂವರೆ ದಶಕ ಕಳೆದರೂ ಗೆಜೆಟಿಯರ್ ಭಾಗ್ಯವಿಲ್ಲ

ಬಿರುಸು ಪಡೆಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೆಜೆಟಿಯರ್‌ ರಚನೆ ಪ್ರಕ್ರಿಯೆ
ಡಿ.ಎಂ.ಕುರ್ಕೆ ಪ್ರಶಾಂತ್
Published 13 ಮೇ 2024, 5:41 IST
Last Updated 13 ಮೇ 2024, 5:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅವಿಭಜಿತ ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರವು ಜಿಲ್ಲೆಯಾಗಿ ಅಸ್ತಿತ್ವ ಪಡೆದು ಒಂದೂವರೆ ದಶಕ ಕಳೆದಿದೆ. ಆದರೆ ಈವರೆಗೂ ಜಿಲ್ಲೆಗೆ ಪ್ರತ್ಯೇಕ ಗೆಜೆಟಿಯರ್ ಹೊಂದುವ ‘ಭಾಗ್ಯ’ ದೊರೆತಿಲ್ಲ.

2021ರ ಫೆಬ್ರುವರಿಯಲ್ಲಿ ಚಿಕ್ಕಬಳ್ಳಾಪುರ ಗೆಜೆಟಿಯರ್ ರಚನೆಯ ಪ್ರಕ್ರಿಯೆಗಳಿಗೆ ಚಾಲನೆ ದೊರೆತಿತ್ತು. ಹೀಗೆ ಚಾಲನೆ ದೊರೆತು ಮೂರು ವರ್ಷ ದಾಟಿದರೂ ಗೆಜೆಟಿಯರ್ ರಚನೆಯ ಪ್ರಕ್ರಿಯೆಗಳು ಪ್ರಗತಿ ಕಂಡಿಲ್ಲ. ಆರಂಭದಲ್ಲಿ ಹೇಗಿತ್ತೊ ಅದೇ ಸ್ಥಿತಿಯಲ್ಲಿದೆ. 

ಜಿಲ್ಲೆಯ ಸಮಗ್ರ ದರ್ಶನ ಒದಗಿಸಲು ಸಹಕಾರಿಯಾಗುವ ಗೆಜೆಟಿಯರ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಮತ್ತು ಸಾರ್ವಜನಿಕರಿಗೆ ಉಪಯುಕ್ತ ಆಕರವಾಗುತ್ತದೆ. ಜತೆಗೆ ಜಿಲ್ಲೆಯ ಆಡಳಿತಕ್ಕೆ ಹೊಸದಾಗಿ ನೇಮಕವಾಗುವ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿ, ತಹಶೀಲ್ದಾರ್‌ ಸೇರಿದಂತೆ ಇತರ ಅಧಿಕಾರಿಗಳಿಗೆ ತಾವು ಆಡಳಿತ ನಡೆಸುವ ಭೂಭಾಗದ ಪೂರ್ತಿ ಅರಿವು ಮತ್ತು ಪರಿಚಯ ಹಾಗೂ ಅಲ್ಲಿನ ಸ್ಥಿತಿಗತಿಗಳ ಸಮಸ್ಯೆಗಳ ಪರಿಚಯಿಸುವ ಕೈಪಿಡಿಯಾಗಿರುತ್ತದೆ.

ಆದರೆ, ಇಂದಿಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಮಾಹಿತಿ ಬೇಕಾದರೆ ಅಧಿಕಾರಿಗಳು ಕೋಲಾರದ ಗೆಜೆಟಿಯರ್ ಮೊರೆ ಹೋಗಬೇಕಾಗಿದೆ. 1968ರಲ್ಲಿ ಕೋಲಾರ ಗೆಜೆಟಿಯರ್ ಆಂಗ್ಲ ಆವೃತ್ತಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. 2012 ರ ಮಾರ್ಚ್‌ನಲ್ಲಿ ಅದರದೇ ಪರಿಷ್ಕೃತ ಆವೃತ್ತಿ ಬಿಡುಗಡೆಯಾಗಿತ್ತು. 2005ರಲ್ಲಿ ಕೋಲಾರ ಗೆಜೆಟಿಯರ್ ಕನ್ನಡ ಆವೃತ್ತಿ ಪ್ರಕಟವಾಗಿತ್ತು.

ಬ್ರಿಟಿಷರ ಕಾಲದಲ್ಲಿದ್ದ ಗೆಜೆಟಿಯರ್‌ ಪ್ರಕಟಿಸುವ ಪರಿಪಾಠ ಸ್ವಾತಂತ್ರ್ಯ ಬಂದ ಬಳಿಕವೂ ಮುಂದುವರೆಯಿತು. ಅದಕ್ಕಾಗಿಯೇ ರಾಜ್ಯದಲ್ಲಿ 1958ರಲ್ಲಿ ರಾಜ್ಯ ಗೆಜೆಟಿಯರ್ ಇಲಾಖೆ ಅಸ್ತಿತ್ವಕ್ಕೆ ಬಂತು. ಆದರೆ, 1997ರ ಬಳಿಕ ಹೊಸದಾಗಿ ರಚನೆಯಾದ ಬಹಳಷ್ಟು ಜಿಲ್ಲೆಗಳಿಗೆ ಇನ್ನೂ ಗೆಜೆಟಿಯರ್ ರಚನೆಯಾಗಿಲ್ಲ.

ಕೈಗೂಡದ ಪ್ರಯತ್ನ: ಚಿಕ್ಕಬಳ್ಳಾಪುರ ಜಿಲ್ಲೆಯ ಗೆಜೆಟಿಯರ್ ರಚನೆಗೆ 2021ರಲ್ಲಿ ಪ್ರಯತ್ನಗಳು ಆರಂಭವಾಗಿದ್ದವು. ಬೆಂಗಳೂರಿನ ಕಾವೇರಿ ಭವನದಲ್ಲಿ ಒಂದು ಸಭೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗೆಜೆಟಿಯರ್‌ಗೆ ಸಂಬಂಧಿಸಿದಂತೆ ಕಾರ್ಯಾಗಾರ ಸಹ ನಡೆದಿತ್ತು.

ಶಿಕ್ಷಣ ತಜ್ಞ ಕೋಡಿ ರಂಗಪ್ಪ, ಲೇಖಕರಾದ ರಂಗಾರೆಡ್ಡಿ ಕೋಡಿರಾಂಪುರ, ಚಿಂತಾಮಣಿ ಸರ್ಕಾರಿ ಮಹಿಳಾ ಪದವಿ ಮತ್ತು ಸ್ನಾತಕೋತ್ತರ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯ ಎಂ.ಎನ್.ರಘು ಹೀಗೆ ವಿವಿಧ ಕ್ಷೇತ್ರಗಳ ವಿಷಯ ಪರಿಣತರಿಗೆ ಗೆಜೆಟಿಯರ್ ರಚನೆಯ ಜವಾಬ್ದಾರಿವಹಿಸಲಾಗಿತ್ತು. ಈ ನಡುವೆ ರಂಗಾರೆಡ್ಡಿ ಕೋಡಿರಾಂಪುರ ಹಾಗೂ ರಘು ನಿಧನರಾದರು. 

ಗೆಜೆಟಿಯರ್ ರಚನಾ ಕಾರ್ಯಕ್ಕಾಗಿ ಇಲಾಖೆಯು 20 ಲೇಖಕರನ್ನು ನಿಯೋಜಿಸಿತ್ತು. ಈ ಲೇಖಕರಿಗಾಗಿಯೇ ಇಲಾಖೆಯು 2021ರ ಫೆಬ್ರುವರಿಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಗೆಜೆಟಿಯರ್ ರಚನೆಯ ತರಬೇತಿ ಕಾರ್ಯಾಗಾರ ನಡೆಸಿತ್ತು.  

ಕೊರೊನಾ ಲೇಖಕರ ಕ್ಷೇತ್ರ ಅಧ್ಯಯನಕ್ಕೆ ತಡೆ ನೀಡಿತು. ಮಾಹಿತಿಗಳನ್ನು ಕಲೆಹಾಕುವುದೂ ಕಷ್ಟವಾಯಿತು. ಗೆಜೆಟಿಯರ್‌ಗೆ ವಿಚಾರಗಳನ್ನು ದಾಖಲಿಸಲು ಕ್ಷೇತ್ರ ಅಧ್ಯಯನ ಪ್ರಮುಖವಾಗುತ್ತದೆ. ಆಯಾ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಬೇಕಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಆದರೆ ಈ ಎಲ್ಲ ಅಧ್ಯಯನಗಳಿಗೂ ಲಾಕ್‌ಡೌನ್ ಮತ್ತು ಕೊರೊನಾ ತಡೆ ನೀಡಿತು. ಈ ಕಾರಣದಿಂದ ಗೆಜೆಟಿಯರ್ ರಚನೆಗೆ ತಾತ್ಕಾಲಿಕ ಗ್ರಹಣ ತಗುಲಿತು. ಆದರೆ ಕೊರೊನಾ ಸದ್ದು ಅಡಗಿ ಎರಡು ವರ್ಷವಾಗಿದೆ. ಗೆಜೆಟಿಯರ್ ರಚನೆಯ ಪ್ರಕ್ರಿಯೆಗಳು ಮಾತ್ರ ಇದ್ದಲ್ಲಿಯೇ ಇವೆ.

ಗೆಜೆಟಿಯರ್ ಅನುಕೂಲ: ಗೆಜೆಟಿಯರ್‌ನಲ್ಲಿ ಆ ಜಿಲ್ಲೆಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಸಮಗ್ರ ಚಿತ್ರಣ ಇರುತ್ತದೆ. ಇತಿಹಾಸ, ಜನ, ಜೀವನ, ಭಾಷೆಗಳು, ಕೃಷಿ ಮತ್ತು ನೀರಾವರಿ, ಅರಣ್ಯ, ಕೈಗಾರಿಕೆಗಳು, ಬ್ಯಾಂಕಿಂಗ್, ವಾಣಿಜ್ಯ, ಸಾರಿಗೆ, ಸಂಪರ್ಕ, ಆರ್ಥಿಕ ಪ್ರವೃತ್ತಿಗಳು, ಸಾಮಾನ್ಯ ಆಡಳಿತ, ಶಿಕ್ಷಣ ಮತ್ತು ಸಂಸ್ಕೃತಿ, ವೈದ್ಯ, ಸಾರ್ವಜನಿಕ ಆರೋಗ್ಯ, ಐತಿಹಾಸಿಕ, ರಾಜಕಾರಣ ಹಾಗೂ ಪ್ರೇಕ್ಷಣೀಯ ಸ್ಥಳಗಳು, ವ್ಯಾಪಾರ ಕೇಂದ್ರಗಳ ಮಾಹಿತಿ ಸೇರಿದಂತೆ ಹತ್ತು ಹಲವು ವಿವರಗಳು ದಾಖಲಾಗುತ್ತವೆ.

ಗೆಜೆಟಿಯರ್ ವ್ಯಕ್ತಿಗಳ ಕುರಿತ ಮಾಹಿತಿ, ಭೌಗೋಳಿಕ ನಿಘಂಟು, ಪ್ರಾಂತ್ಯದ ಜನಜೀವನ ಸೇರಿದಂತೆ ಹಲವು ಆಯಾಮಗಳ ವಾಸ್ತವ ಜ್ಞಾನದ ಸಮೃದ್ಧ ಭಂಡಾರವಾಗಿದೆ. ಇದನ್ನು ‘ಪ್ರಾದೇಶಿಕ ವಿಶ್ವಕೋಶ’ ಎಂದೂ ಕರೆಯುವರು. 

ಜಿಲ್ಲೆಯ ಸಮಗ್ರ ದರ್ಶನ ಒದಗಿಸಲು ಸಹಕಾರಿಯಾಗುವ ಗೆಜೆಟಿಯರ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಮತ್ತು ಸಾರ್ವಜನಿಕರಿಗೆ ಉಪಯುಕ್ತ ಆಕರವಾಗುತ್ತದೆ. ಅಧಿಕಾರಿಗಳು ಜಿಲ್ಲೆಯ ಭೌಗೋಳಿಕ ಅರಿವು, ಸ್ಥಿತಿಗತಿಯ ಮಾಹಿತಿ ದೊರೆಯಲಿದೆ. ಇಷ್ಟೆಲ್ಲ ಮಹತ್ವದ ಆಕರವಾಗುವ ಗೆಜೆಟಿಯರ್ ರಚನೆ ಜಿಲ್ಲೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನವಹಿಸಿ ಗೆಜೆಟಿಯರ್ ಪ್ರಕ್ರಿಯೆಗೆ ವೇಗ ನೀಡಬೇಕು ಎನ್ನುವುದು ಪ್ರಜ್ಞಾವಂತರ ಒತ್ತಾಯ. 

ಶೀಘ್ರದಲ್ಲಿಯೇ ಚಟುವಟಿಕೆಗೆ ಚಾಲನೆ

ಗೆಜೆಟಿಯರ್ ರಚನೆಗೆ ಲೇಖಕರಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿತ್ತು. ಅವರಲ್ಲಿ ಕೆಲವರು ಮೃತರಾದರು. ಹೀಗೆ ನಾನಾ ಕಾರಣಗಳಿಂದ ತಡವಾಗಿದೆ. ಆದರೆ ನನಗೆ ದೊರೆತಿರುವ ಮಾಹಿತಿ ಪ್ರಕಾರ ಶೀಘ್ರದಲ್ಲಿಯೇ ಈ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಚಟುವಟಿಕೆಗಳು ಆರಂಭವಾಗಲಿವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ ತಿಳಿಸಿದರು.  *** ‘ಬೇಗ ಪೂರ್ಣವಾಗಲಿ’ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಗೆಜೆಟಿಯರ್‌ ಪ್ರಮುಖ ಆಧಾರ. ಕೋಲಾರ ಗೆಜೆಟಿಯರ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿಚಾರಗಳು ಸಮಗ್ರವಾಗಿಲ್ಲ. ಈ ಹಿಂದೆ ಗೆಜೆಟಿಯರ್ ರಚನೆಗೆ ಮುಂದಾಗಿತ್ತು. ಆದರೆ ಆ ಪ್ರಕ್ರಿಯೆಗಳು ಕುಂಠಿತವಾಗಿದೆ. ಆದಷ್ಟು ಬೇಗ ಜಿಲ್ಲೆಗೆ ಪ್ರತ್ಯೇಕ ಗೆಜೆಟಿಯರ್ ರಚನೆ ಆಗಬೇಕು ಎನ್ನುತ್ತಾರೆ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT