ಗೌರಿಬಿದನೂರು: ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಿಗ್ಗೆ ಉತ್ತಮ ಮಳೆಯಾಗಿದೆ. ಕೆರೆ, ಕುಂಟೆಗಳು ನೀರಿನಿಂದ ತುಂಬಿವೆ.
ಕಳೆದ ಒಂದೂವರೆ ತಿಂಗಳಿನಿಂದ ಮಳೆಯಿಲ್ಲದೆ ಪರಿತಪಿಸುತ್ತಿದ್ದ ರೈತರು ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಆತಂಕಗೊಂಡಿದ್ದಾರೆ. ಅತ್ಯಲ್ಪ ಮಳೆಯಲ್ಲಿ ಬೆಳೆದು ನಿಂತಿದ್ದ ಮುಸುಕಿನ ಜೋಳ, ರಾಗಿ ಹಾಗೂ ನೆಲಗಡಲೆ ಬೆಳೆಗಳು ಕೈಗೆಟುಕದಂತಾಗಿವೆ.
ಪ್ರತೀ ಜಮೀನಿನಲ್ಲಿ ಮಳೆ ನೀರು ಶೇಖರಣೆಯಾಗಿದೆ. ಇದರಿಂದಾಗಿ ಫಸಲಿನ ಜತೆಗೆ ಜಾನುವಾರುಗಳಿಗೆ ಮೇವು ಕೂಡ ದೊರೆಯದ ಸ್ಥಿತಿ ನಿರ್ಮಾಣವಾಗಿದೆ.
ಗೌರಿಬಿದನೂರು ನಗರದಲ್ಲಿ 2.2 ಮಿ.ಮೀ, ಹೊಸೂರಿನಲ್ಲಿ 7.2 ಮಿ.ಮೀ, ಡಿ.ಪಾಳ್ಯದಲ್ಲಿ 88 ಮಿ.ಮೀ, ವಾಟದಹೊಸಹಳ್ಳಿ ಯಲ್ಲಿ 34 ಮಿ.ಮೀ, ಮಂಚೇನಹಳ್ಳಿಯಲ್ಲಿ 68 ಮಿ.ಮೀ, ತೊಂಡೇಬಾವಿ ಯಲ್ಲಿ 9 ಮಿ.ಮೀ ಹಾಗೂ ತಿಪ್ಪಗಾನಹಳ್ಳಿಯಲ್ಲಿ 12.4 ಮಿ.ಮೀ ಮಳೆಯಾಗಿದೆ.
ಮಂಚೇನಹಳ್ಳಿ ಹಾಗೂ ಡಿ.ಪಾಳ್ಯ ಹೋಬಳಿ ವ್ಯಾಪ್ತಿಯಲ್ಲಿನ ಬಹುತೇಕ ಕೆರೆಗಳು ಕೋಡಿ ಬಿದ್ದಿವೆ. ಇದರಿಂದ ಹರಿದು ಹೊರಬರುವ ನೀರು ಉತ್ತರ ಪಿನಾಕಿನಿ ನದಿ ಸೇರಿದ ಪರಿಣಾಮವಾಗಿ ನದಿಯು ಮೈದುಂಬಿ ಹರಿಯುತ್ತಿದೆ. ಶನಿವಾರ ಕಿಂಡಿ ಅಣೆಕಟ್ಟಿನ ಮೂಲಕ ನಗರಕ್ಕೆ ಸಮೀಪವಾಗಿ ನದಿಯಲ್ಲಿ ನೀರು ಹರಿಯುತ್ತಿದ್ದು ಇದನ್ನು ನೋಡಲು ಜನರು ತಂಡೋಪತಂಡವಾಗಿ ಪಿನಾಕಿನಿ ನದಿಯತ್ತ ಬಂದರು.
ದಶಕಗಳಿಂದ ಕ್ಷೀಣಿಸಿದ್ದ ಅಂತರ್ಜಲದಿಂದ ಬತ್ತಿದ್ದ ಕೊಳವೆ ಬಾವಿಗಳಲ್ಲಿ ಹೊಸ ನೀರು ಬಂದು ಅಂತರ್ಜಲದ ಮಟ್ಟ ವೃದ್ಧಿಯಾಗಿದೆ. ಸುಮಾರು ಎರಡು ದಶಕಗಳಿಂದ ಕಾಣದ ನೀರು ಪಿನಾಕಿನಿ ನದಿಯಲ್ಲಿ ಹರಿದಿವೆ.
ಕುಂಟೆಗಳು, ಚೆಕ್ ಡ್ಯಾಂಗಳು, ತಗ್ಗು ಪ್ರದೇಶಗಳು ಮಳೆ ನೀರಿನಿಂದ ಆವೃತವಾಗಿವೆ. ಅಲ್ಲಲ್ಲಿ ರಸ್ತೆ ಬದಿಯಲ್ಲಿನ ಮರಗಳು ಉರುಳಿ ಬಿದ್ದಿದ್ದ ಪರಿಣಾಮವಾಗಿ ಸಂಚಾರಕ್ಕೆ ತೊಂದರೆಯಾಗಿದೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.