ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಕೊಕ್ಕರೆಗಳ ಸಾಮೂಹಿಕ ಅಂತ್ಯಸಂಸ್ಕಾರ

ಸಾವಿಗೆ ಕಾರಣ ಇನ್ನೂ ನಿಗೂಢ
Last Updated 23 ಜನವರಿ 2021, 2:15 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ಕಾದಲವೇಣಿ ಗ್ರಾಮದ ಕೆರೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕೊಕ್ಕರೆಗಳ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿಯದೆ, ಸ್ಥಳೀಯ ‌ಜನತೆ ಆತಂಕದಲ್ಲಿದ್ದಾರೆ. ಈ ನಡುವೆ ಕೊಕ್ಕರೆಗಳನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿದೆ.

ಗುರುವಾರ ಕಾದಲವೇಣಿ ಕೆರೆಯಲ್ಲಿ ಕೊಕ್ಕರೆಗಳ ಸಾಮೂಹಿಕ ಸಾವಿನ ಬಗ್ಗೆ ಆತಂಕಗೊಂಡ ಸ್ಥಳೀಯರನ್ನು ಅಧಿಕಾರಿಗಳು ಸಮಾಧಾನಪಡಿದಿದ್ದರು. ವಿಷಯ ಜಿಲ್ಲೆ ಹಾಗೂ ರಾಜ್ಯಮಟ್ಟದ ಅಧಿಕಾರಿಗಳ ಗಮನಕ್ಕೂ ಹೋಗಿದೆ. ಆದರೆ, ಕೊಕ್ಕರೆಗಳ ರಕ್ತ ಪರೀಕ್ಷೆಯ ವರದಿ ಬರುವವರೆಗೂ ಸಾವಿಗೆ ಕಾರಣ ತಿಳಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಪಶು ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ತಿಪ್ಪೇಸ್ವಾಮಿ, ಉಪನಿರ್ದೇಶಕರಾದ ಡಾ.ಜನಾರ್ಧನ್, ತಾಲ್ಲೂಕು ‌ಸಹಾಯಕ ನಿರ್ದೇಶಕರಾದ ಡಾ.ಆರ್.ರಾಘವೇಂದ್ರ ಸೇರಿದಂತೆ ‌ಇನ್ನಿತರ ಇಲಾಖೆಯ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಕೆರೆಯ ಬಳಿ ಬಂದು ಪರಿಶೀಲಿಸಿದರು. ಎರಡು–ಮೂರು ದಿನಗಳಿಂದ ಸತ್ತು‌ ನೀರು ಮತ್ತು ಜಾಲಿ ಮರಗಳಲ್ಲಿದ್ದ ಕೊಕ್ಕರೆಗಳನ್ನು ಹೊರತೆಗೆದು ಅವುಗಳಿಂದ ಯಾವುದೇ ಸೋಂಕು ಹರಡದಂತೆ ರಾಸಾಯನಿಕ ವಸ್ತುಗಳನ್ನು ಸಿಂಪಡಿಸಿ ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆದು ಅವುಗಳನ್ನು ಸಾಮೂಹಿಕವಾಗಿ ಮುಚ್ಚಿಸಿದ್ದಾರೆ.

ಕಾದಲವೇಣಿ ಗ್ರಾಮದಲ್ಲಿ ಪಶು ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ‘ಕೆರೆಯಲ್ಲಿ ಸತ್ತಿರುವ ಕೊಕ್ಕರೆಗಳಿಂದ ಗ್ರಾಮದ ಜನತೆಗೆ ಯಾವುದೇ ರೀತಿಯಸೋಂಕು ಅಥವಾ ತೊಂದರೆಯಾಗುವುದಿಲ್ಲ. ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಆಟೋದಲ್ಲಿ ಪ್ರಚಾರ ನಡೆಸಿ, ಅಧಿಕಾರಿಗಳ ಮೂಲಕ ಜನರಲ್ಲಿ ಜಾಗೃತಿ ಸಭೆ ನಡೆಸಿದ್ದಾರೆ.

ತಾಲ್ಲೂಕು ಸಹಾಯಕ ಪಶು ಇಲಾಖೆಯ ಅಧಿಕಾರಿ ಡಾ.ಆರ್.ರಾಘವೇಂದ್ರ ಪ್ರತಿಕ್ರಿಯಿಸಿ, ‘ಸತ್ತಿದ್ದ 3 ಕೊಕ್ಕರೆಗಳನ್ನು ಹೊರತೆಗೆದು ಅವುಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಜೈವಿಕ ಸಂಶೋಧನಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ಒಂದು ಹಂತದ ವರದಿ ಲಭ್ಯವಾಗಿದ್ದು, ಮತ್ತೊಂದು ಅಂತಿಮ ವರದಿಯು ಬಂದ ಬಳಿಕ ಜಿಲ್ಲಾಧಿಕಾರಿಯವರ ಮೂಲಕ ಸ್ಪಷ್ಟ ಮಾಹಿತಿ ನೀಡಲಾಗುವುದು. ಪ್ರಸ್ತುತ ಕೆರೆಯಲ್ಲಿ ಸತ್ತಿದ್ದ ಸುಮಾರು 60 ಕೊಕ್ಕರೆಗಳನ್ನು ಹೊರ ತೆಗೆದು ಹೂಳಲಾಗಿದೆ.ಜನರಲ್ಲಿ ಯಾವುದೇ ಆತಂಕ ಬೇಡ’ ಎಂದರು.

ಕೋಳಿ ಫಾರಂ ಮಾಲೀಕರ ಆತಂಕ
ಕಾದಲವೇಣಿ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಕೋಳಿ ಫಾರಂಗಳಿದ್ದು, ಕೊಕ್ಕರೆಗಳ ಸಾಮೂಹಿಕ ಸಾವಿನಿಂದ ಫಾರಂ ಮಾಲೀಕರು ಆತಂಕಗೊಂಡಿದ್ದಾರೆ. ಲಕ್ಷಾಂತರ ಬೆಲೆಯ ಕೋಳಿ ಮರಿಗಳನ್ನು ಸಾಕಾಣಿಕೆ ಮಾಡುತ್ತಿದ್ದು, ಕೊಕ್ಕರೆಗಳ ಸಾವಿನಿಂದ ಹಕ್ಕಿ ಜ್ವರ ಬಂದರೆ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎನ್ನುತ್ತಿದ್ದಾರೆ. ‘ಫಲಿತಾಂಶದ ವರದಿ ಅಧಿಕಾರಿಗಳ ಕೈ ಸೇರಿ, ಅದರಿಂದ ಯಾವುದೇ ತೊಂದರೆ ಇಲ್ಲ ಎಂದು ಹೇಳುವವರೆಗೂ ನಮಗೆ ನೆಮ್ಮದಿ ಇಲ್ಲ’ ಎಂದು ಫಾರಂ ಮಾಲೀಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT