ಚಿಕ್ಕಬಳ್ಳಾಪುರ: ಛತ್ರಪತಿ ಶಿವಾಜಿಅವರು ದೇಶದ ಇತಿಹಾಸದ ಪುಟದಲ್ಲಿ ಅಪ್ರತಿಮ ವೀರರಾಗಿದ್ದಾರೆ. ಅವರ ಕೊಡುಗೆ ಅಪಾರ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಅಮರೇಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಛತ್ರಪತಿ ಶಿವಾಜಿ ಜಯಂತಿಯಲ್ಲಿ ಮಾತನಾಡಿದರು.
ಶಿವಾಜಿ ಅವರ ಬಾಲ್ಯದ ಬಗ್ಗೆ ಎಲ್ಲ ಮಕ್ಕಳಿಗೂ ತಿಳಿಸಬೇಕು. ಪಾಲಕರು ಮಕ್ಕಳನ್ನೂ ಬಾಲ್ಯದಲ್ಲಿಯೇ ತಿದ್ದುವ ಹಾಗೂ ಮೌಲ್ಯಗಳ ಬಗ್ಗೆ ತಿಳಿಸುವ ಕೆಲಸ ಮಾಡಬೇಕು. ಶಿವಾಜಿ ಅವರ ತಾಯಿ ಜೀಜಾಬಾಯಿ ಬಾಲ್ಯದಲ್ಲಿಯೇ ಶಿವಾಜಿ ಅವರಿಗೆ ಉತ್ತಮ ಸಂಸ್ಕಾರ ಹಾಗೂ ಯುದ್ಧಕಲೆಗಳನ್ನು ಕರಗತ ಮಾಡಿಸಿದ್ದರು ಎಂದರು.
ಶಿವಾಜಿ ಉತ್ತಮ ಪರಾಕ್ರಮಿ. ಚಾಣಾಕ್ಷರಾಗಿದ್ದರು. ಅವರ ಆದರ್ಶಗಳು ಇಂದಿನ ಯುವಕರಿಗೆ ಪ್ರೇರಣೆ ಆಗಬೇಕು. ಆಧುನಿಕ ಜೀವನದ ಧಾವಂತದಲ್ಲಿ ನಾವು ಮಕ್ಕಳನ್ನು ನಿರ್ಲಕ್ಷಿಸುತ್ತಿದ್ದೇವೆ. ಆದ್ದರಿಂದ ಮಕ್ಕಳಿಗೆ ಶಿವಾಜಿ ಅವರ ಆದರ್ಶಗಳ ಬಗ್ಗೆ ತಿಳಿ ಹೇಳಬೇಕು ಎಂದು ತಿಳಿಸಿದರು
ಮರಾಠ ಸಮುದಾಯದ ಪದಾಧಿಕಾರಿಗಳಾದ ಸುರೇಶ್ ಬಾಬು, ಜೈಮುನಿ ರಾವ್, ಈಶ್ವರ್ ರಾವ್, ಗೀತಾಬಾಯಿ, ಆಶಾಬಾಯಿ, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.