ಚಿಕ್ಕಬಳ್ಳಾಪುರ: ನಗರದ ಬಿಬಿ ರಸ್ತೆಯ ವಿಭಜಕದಲ್ಲಿ ನೆಟ್ಟಿರುವ ಗಿಡಗಳು ನೀರಿಲ್ಲದೆ ಒಣಗುತ್ತಿವೆ. ಒಕ್ಕಲಿಗರ ಕಲ್ಯಾಣ ಮಂಟಪದ ಮುಂಭಾಗ, ಬಾಲಾಜಿ ಚಿತ್ರ ಮಂದಿರದ ಎದುರು–ಹೀಗೆ ಬಿಬಿ ರಸ್ತೆಯ ರಸ್ತೆ ವಿಭಜಕದ ನಡುವೆ ಗಿಡಗಳನ್ನು ಹಾಕಲಾಗಿದೆ.
ಡಿ.ಎಸ್.ಆನಂದರೆಡ್ಡಿ ಬಾಬು ನಗರಸಭೆ ಅಧ್ಯಕ್ಷರಾಗಿದ್ದ ವೇಳೆ ತೋಟಗಾರಿಕಾ ಇಲಾಖೆಯ ಸಹಕಾರದಲ್ಲಿ ಈ ಸಸಿಗಳನ್ನು ನಾಟಿ ಮಾಡಲಾಗಿತ್ತು. ನಂತರ ನಗರಸಭೆಯಿಂದಲೇ ಗಿಡಗಳಿಗೆ ನೀರು ಪೂರೈಸಲಾಗುತ್ತಿತ್ತು. ಆದರೆ ಈಗ ಬೇಸಿಗೆಯ ಕಾಲದಲ್ಲಿ ಗಿಡಗಳು ನೀರಿಲ್ಲದೆ ಒಣಗುತ್ತಿವೆ.
ಬಹಳಷ್ಟು ಗಿಡಗಳು ನೀರಿಲ್ಲದೆ ನಾಶವಾಗುವ ಹಂತಕ್ಕೆ ತಲುಪಿವೆ. ಗಿಡಗಳು ನಾಶವಾದರೆ ಇದಕ್ಕೆ ಖರ್ಚು ಮಾಡಿದ ಹಣವೂ ವ್ಯರ್ಥವಾದಂತಾಗುತ್ತದೆ. ಗಿಡಗಳಿಗೆ ನೀರುಣಿಸಿ ಮತ್ತು ನಿರ್ವಹಣೆ ಮಾಡಿ ಬಹಳ ದಿನಗಳಾಗಿವೆ.
‘ಮಳೆ ಸುರಿದಿದ್ದರೆ ಗಿಡಗಳಿಗೆ ನೀರುಣಿಸುವ ಅವಶ್ಯ ಇರಲಿಲ್ಲ. ಆದರೆ ಬಿಸಿಲು ಹೆಚ್ಚಿದೆ. ನಾಟಿ ಮಾಡಿರುವ ಗಿಡಗಳು ಹಾಳಾಗದಂತೆ ಕಾಪಾಡಿಕೊಳ್ಳಬೇಕು. ನಗರಸಭೆ ನೀರುಣಿಸುವ ವ್ಯವಸ್ಥೆ ಮಾಡಬೇಕು. ನಿತ್ಯ ಎರಡು ಮೂರು ಟ್ಯಾಂಕರ್ ನೀರು ಹರಿಸಿದರೆ ಸಾಕು’ ಎನ್ನುತ್ತಾರೆ ನಾಗರಿಕ ಮುನಿರಾಜು.
‘ಅಧಿಕಾರಿಗಳು ಎಚ್ಚೆತ್ತು ನೀರುಣಿಸಿ’
ನಾನು ಅಧ್ಯಕ್ಷನಾಗಿದ್ದ ವೇಳೆ ಗಿಡಗಳನ್ನು ನಾಟಿ ಮಾಡಲಾಗಿತ್ತು. ಸದಾ ವಾಹನಗಳಿಂದ ಗಿಜಿಗುಡುವ ರಸ್ತೆಯಲ್ಲಿ ಹಸಿರು ಕಾಣಲಿ ಎಂದು ಗಿಡಗಳನ್ನು ಹಾಕಲಾಗಿತ್ತು. ಹಸಿರೀಕರಣದಿಂದ ನಗರದ ಸೌಂದರ್ಯ ಸಹ ಹೆಚ್ಚಲಿ ಎನ್ನುವ ಆಶಯವಿತ್ತು. ಆದರೆ ಈಗ ನಿರ್ವಹಣೆ ಇಲ್ಲದೆ ಗಿಡಗಳು ನಾಶವಾಗುತ್ತಿವೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಬೇಸರ ವ್ಯಕ್ತಪಡಿಸುವರು. ನಾವು ಅಧಿಕಾರದಲ್ಲಿ ಇರುವವರೆಗೂ ಇವುಗಳ ನಿರ್ವಹಣೆ ಸಮರ್ಪಕವಾಗಿತ್ತು. ಸಸಿಗಳು ಬಾಡುತ್ತಿವೆ. ಕೆಲವು ಕಡೆಗಳಲ್ಲಿ ತೀರ ನಾಶವಾಗುವ ಹಂತದಲ್ಲಿವೆ. ಅಧಿಕಾರಿಗಳು ಪೂರ್ಣವಾಗಿ ನಾಶವಾಗುವಷ್ಟರಲ್ಲಿ ಎಚ್ಚೆತ್ತು ಇವುಗಳ ಆರೈಕೆ ಮಾಡಬೇಕು. ಸಮಯಕ್ಕೆ ಸರಿಯಾಗಿ ನೀರುಣಿಸಬೇಕು ಎನ್ನುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.