ಗುಡಿಬಂಡೆ: ಸೌಲಭ್ಯಗಳಿಗಾಗಿ ಸಾರ್ವಜನಿಕರು ಕಚೇರಿಗಳಿಗೆ ಅಲೆಯಬೇಕಿಲ್ಲ. ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ತೆರಳಿ ಕಂದಾಯ ಇಲಾಖೆಯ ಮಾಹಿತಿ. ಸೌಲಭ್ಯಗಳ ಬಗ್ಗೆ ತಿಳಿಸುತ್ತಿದ್ದಾರೆ.
ಜಿಲ್ಲಾಧಿಕಾರಿ, ಶಾಸಕರ ಸೂಚನೆಯಂತೆ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೇ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಗುಡಿಬಂಡೆ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಚಾಲನೆ ನೀಡಿದ್ದಾರೆ.
ತಾಲ್ಲೂಕಿನ ಕಸಬಾ ಹೋಬಳಿಯ ಉಲ್ಲೋಡು ಕಂದಾಯ ವೃತ್ತದ ಪ್ರತಿ ಹಳ್ಳಿಯ ಮನೆ ಮನೆಗೆ ತೆರಳಿ ಸಾಮಾಜಿಕ ಭದ್ರತಾ ಯೋಜನೆ, ಫೌತಿವಾರು ಖಾತೆ ಸೇರಿದಂತೆ ವಿವಿಧ ಸರ್ಕಾರಿ ಸೇವೆಗಳ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ.
ಹಿರಿಯ ನಾಗರೀಕರು, ಅಂಗವಿಕಲರಿಗೆ ಹಾಗೂ ವಿಧವಾ ವೇತನ ಅರ್ಜಿ ಪಡೆದು ಸೌಲಭ್ಯಗಳನ್ನು ಸ್ಥಳದಲ್ಲೆ ಮಾಡಿಕೊಡುತ್ತಿದ್ದಾರೆ.
ತಹಶೀಲ್ದಾರ್ ಸಿಗ್ಬತುಲ್ಲ, ಕಂದಾಯ ನಿರೀಕ್ಷ ಅಮರನಾರಾಯಣ, ರವೀಂದ್ರ ಹಾಗೂ ತಾಲೂಕಿನ 8 ಕಂದಾಯ ವೃತ್ತಗಳಲ್ಲಿನ ಗ್ರಾಮಲೆಕ್ಕಿಗರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿನ ಮನೆ ಮನೆಗೆ ಭೇಟಿ ನೀಡಿ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ತಹಶೀಲ್ದಾರ್ ಸಿಗ್ಬತುಲ್ಲ ಮಾತನಾಡಿ ಒಂದು ವಾರದಿಂದ ತಾಲ್ಲೂಕಿನ 8 ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿದ್ದೇವೆ. ಸಾಮಾಜಿಕ ಭದ್ರತಾ ಯೋಜನೆಗೆ 78, ಫೌತಿವಾರು ಖಾತೆಗೆಸಂಬಂಧಿಸಿದ 28 ಅರ್ಜಿಗಳು ಬಂದಿವೆ. ಇವುಗಳನ್ನು ಶೀಘ್ರವಾಗಿ ವಿಲೆವಾರಿ ಮಾಡುತ್ತೇವೆ. ಆ 12ರವರೆಗೆ ಅರ್ಜಿಗಳು ಬಂದ ನಂತರ ಅರ್ಜಿಗಳನ್ನು ಪರೀಶಿಲಿಸಿ ಆ15 ರಂದು ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗುವುದು. ಫೌತಿವಾರು ಖಾತೆ ಅರ್ಜಿಸಲ್ಲಿಸಲು ಆ.31ರ ವರೆಗೆ ಅವಕಾಶ ಇದೆ ಎಂದರು.