ಚಿಕ್ಕಮಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ (43) ಹೃದಯಾಘಾತದಿಂದ ಸೋಮವಾರ ನಿಧನರಾದರು.
ಸುನಿಲ್ ಅವರಿಗೆ ಮಧ್ಯಾಹ್ನ ಎದೆನೋವು ಕಾಣಿಸಿಕೊಂಡಿತು. ಮೂಡಿಗೆರೆಯ ಆಸ್ಪತ್ರೆಗೆ ಒಯ್ಯಲಾಯಿತು. ಆಸ್ಪತ್ರೆಗೆ ತಲುಪುವಷ್ಟರಲ್ಲೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾಗಿ ಕುಟುಂಬದವರು ತಿಳಿಸಿದರು.
ಅವರಿಗೆ ಅಪ್ಪ, ಅಮ್ಮ, ಪತ್ನಿ, ಪುತ್ರ ಇದ್ದಾರೆ. ಮೂಡಿಗೆರೆ ತಾಲ್ಲೂಕಿನ ಸ್ವಗ್ರಾಮ ಹೆಗ್ಗರವಳ್ಳಿಯಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ.
ಸುನಿಲ್ ಮೂಡಿಗೆರೆಯ ಡಿಎಸ್ಬಿಜಿ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಮಾಡಿದ್ದರು. ಬೆಂಗಳೂರಿಗೆ ತೆರಳಿ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿ ‘ಹಾಯ್ ಬೆಂಗಳೂರ್’ ಪತ್ರಿಕೆ ಸೇರಿದ್ದರು. ನಂತರ ಆ ಪತ್ರಿಕೆ ತೊರೆದು ‘ಚಾರ್ಲಿ ಟೈಮ್ಸ್’ ಪತ್ರಿಕೆ ಆರಂಭಿಸಿದ್ದರು. ಕೆಲ ದಿನಗಳಿಂದ ಊರಿನಲ್ಲಿ ನೆಲೆಸಿದ್ದರು.