ಚಿಕ್ಕಮಗಳೂರು: ಪೂರ್ವ ಮುಂಗಾರು ರೀತಿಯಲ್ಲೇ ಮುಂಗಾರು ಮಳೆ ಕೂಡ ಉತ್ತಮವಾಗಿ ಬರುವ ನಿರೀಕ್ಷೆಯಲ್ಲಿರುವ ಜಿಲ್ಲಾಡಳಿತ, ಮಳೆಯಿಂದ ಆಗಬಹುದಾದ ಅನುಹುತ ತಡೆಗೆ ತಯಾರಿ ಮಾಡಿಕೊಂಡಿದೆ.
ಕಳೆದ ವರ್ಷ ವಿಪರೀತ ಬರ ಸ್ಥಿತಿ ಎದುರಿಸಿರುವ ಜಿಲ್ಲೆಯಲ್ಲಿ ಈ ಬಾರಿಯಾರೂ ಉತ್ತಮವಾಗಿ ಮಳೆ ಬರಲಿದೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಪೂರ್ವ ಮುಂಗಾರು ಎಲ್ಲೆಡೆ ಮಳೆ ತರುತ್ತಿದ್ದು, ಮುಂಗಾರು ಕೂಡ ಕಾಫಿನಾಡಿನ ಬರಗಾಲ ನೀಗಿಸಲಿದೆ ಎಂದು ನಂಬಿದ್ದಾರೆ.
ಮುಂಗಾರು ಚುರುಕು ಪಡೆದರೆ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕಾಫಿನಾಡು ಸಂಪೂರ್ಣ ಮಳೆಯ ಊರಾಗಿ ಪರಿವರ್ತನೆಗೊಳ್ಳಲಿದೆ. ಬರಗಾಲದಲ್ಲಿ ಕಳೆದ ವರ್ಷ ಸಾಕಷ್ಟು ನಷ್ಟ ಅನುಭವಿಸಿರುವ ಜನ, ಅತಿವೃಷ್ಟಿಯಾದರೆ ಹಲವು ಅನಾಹುತಗಳನ್ನು ಎದುರಿಸಬೇಕಾಗುತ್ತದೆ. 2019ರಲ್ಲಿ ಸಂಭವಿಸಿದ ಅತಿವೃಷ್ಟಿ ಸಾಕಷ್ಟು ಪಾಠಗಳನ್ನು ಮಲೆನಾಡಿನ ಜನರಿಗೆ ಕಲಿಸಿದೆ.
ಆ ವರ್ಷದ ಮಹಾಮಳೆ ಮಲೆನಾಡನ್ನು ಸಂಪೂರ್ಣವಾಗಿ ಅಪಾಯದಲ್ಲಿ ಸಿಲುಕಿಸಿತ್ತು. ಹಲವೆಡೆ ಗುಡ್ಡ ಕುಸಿತಗೊಂಡಿದ್ದವು. 13 ಜನ ಪ್ರಾಣ ಕಳೆದುಕೊಂಡರೆ, 2500ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು. ರಸ್ತೆಗಳು, ಸೇತುವೆಗಳು ಕೊಚ್ಚಿ ಹೋಗಿದ್ದವು. ಶಾಲೆಗಳು, ಅಂಗನವಾಡಿಗಳು, ಸರ್ಕಾರಿ ಕಾಲೇಜುಗಳು, ಸರ್ಕಾರಿ ಕಟ್ಟಡಗಳು ಹಾಳಾಗಿದ್ದವು.
ಕಾಫಿ ತೋಟ, ಎಕರೆ ತೋಟಗಾರಿಕೆ ಬೆಳೆ, ಕೃಷಿ ಬೆಳೆಗಳು ನಾಶವಾಗಿದ್ದವು. ಈ ಅನಾಹುತದಿಂದ ಚೇತರಿಸಿಕೊಳ್ಳಲು ತಡಕಾಡುತ್ತಿರುವಗಲೇ 2020ರಲ್ಲಿ ಮತ್ತೆ ಮಳೆ ಆರ್ಭಟಿಸಿ ಮತ್ತಷ್ಟು ಹಾನಿ ತಂದೊಡ್ಡಿತು. ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮಳೆ ಬರುವ ಮುನ್ನ ಒಂದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಳೆ ಎದುರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ.
ಅತಿವೃಷ್ಟಿಯಾದರೆ ಹಾನಿ ಸಂಭವಿಸಬಹುದಾದ ಪ್ರದೇಶಗಳನ್ನು ಮೊದಲೇ ಗುರುತಿಸಿಕೊಂಡಿದೆ. ಕೆಲವು ಜನವಸತಿಗಳು ಸಂಪರ್ಕ ಕಡಿತಗೊಂಡರೆ, ಹಲವು ಗ್ರಾಮಗಳು ಸಂಪೂರ್ಣ ಜಲಾವೃತಗೊಳ್ಳುತ್ತವೆ. ಮಳೆ ಜೋರಾಗುವ ಮುನ್ಸೂಚನೆ ಕಂಡರೆ ಈ ರೀತಿ ತೊಂದರೆಗೆ ಸಿಲುಕುವ ಜನರನ್ನು ಸ್ಥಳಾಂತರ ಮಾಡಲು ಸಜ್ಜಾಗಿದೆ.
ಕಾಳಜಿ ಕೇಂದ್ರ, ಈಜುಗಾರರು ಮತ್ತು ಸ್ವಯಂ ಸೇವಕರ ತಂಡಗಳನ್ನು ರಚನೆ ಮಾಡಿಕೊಂಡಿದೆ. ಭೂಕುಸಿತವಾಗುವ ಸಂಭವ ಇರುವ 58 ಜಾಗ, 40 ಕಡೆ ಪ್ರವಾಹ ಎದುರಾಗುವ ಸ್ಥಳ, ನೀರು ತುಂಬಿಕೊಳ್ಳಬಹುದಾದ ಮೂರು ಪ್ರದೇಶಗಳನ್ನು ಗುರುತು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.