ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು: ಮಳೆ ಅನಾಹುತ ತಡೆಗೆ ಸಜ್ಜು; ಮುಂಗಾರು ಬರುವ ಮುನ್ನ ಮುನ್ನೆಚ್ಚರಿಕೆ

Published 20 ಮೇ 2024, 8:51 IST
Last Updated 20 ಮೇ 2024, 8:51 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪೂರ್ವ ಮುಂಗಾರು ರೀತಿಯಲ್ಲೇ ಮುಂಗಾರು ಮಳೆ ಕೂಡ ಉತ್ತಮವಾಗಿ ಬರುವ ನಿರೀಕ್ಷೆಯಲ್ಲಿರುವ ಜಿಲ್ಲಾಡಳಿತ, ಮಳೆಯಿಂದ ಆಗಬಹುದಾದ ಅನುಹುತ ತಡೆಗೆ ತಯಾರಿ ಮಾಡಿಕೊಂಡಿದೆ.

ಕಳೆದ ವರ್ಷ ವಿಪರೀತ ಬರ ಸ್ಥಿತಿ ಎದುರಿಸಿರುವ ಜಿಲ್ಲೆಯಲ್ಲಿ ಈ ಬಾರಿಯಾರೂ ಉತ್ತಮವಾಗಿ ಮಳೆ ಬರಲಿದೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಪೂರ್ವ ಮುಂಗಾರು ಎಲ್ಲೆಡೆ ಮಳೆ ತರುತ್ತಿದ್ದು, ಮುಂಗಾರು ಕೂಡ ಕಾಫಿನಾಡಿನ ಬರಗಾಲ ನೀಗಿಸಲಿದೆ ಎಂದು ನಂಬಿದ್ದಾರೆ.

ಮುಂಗಾರು ಚುರುಕು ಪಡೆದರೆ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕಾಫಿನಾಡು ಸಂಪೂರ್ಣ ಮಳೆಯ ಊರಾಗಿ ಪರಿವರ್ತನೆಗೊಳ್ಳಲಿದೆ. ಬರಗಾಲದಲ್ಲಿ ಕಳೆದ ವರ್ಷ ಸಾಕಷ್ಟು ನಷ್ಟ ಅನುಭವಿಸಿರುವ ಜನ, ಅತಿವೃಷ್ಟಿಯಾದರೆ ಹಲವು ಅನಾಹುತಗಳನ್ನು ಎದುರಿಸಬೇಕಾಗುತ್ತದೆ. 2019ರಲ್ಲಿ ಸಂಭವಿಸಿದ ಅತಿವೃಷ್ಟಿ ಸಾಕಷ್ಟು ಪಾಠಗಳನ್ನು ಮಲೆನಾಡಿನ ಜನರಿಗೆ ಕಲಿಸಿದೆ.

ಆ ವರ್ಷದ ಮಹಾಮಳೆ ಮಲೆನಾಡನ್ನು ಸಂಪೂರ್ಣವಾಗಿ ಅಪಾಯದಲ್ಲಿ ಸಿಲುಕಿಸಿತ್ತು. ಹಲವೆಡೆ ಗುಡ್ಡ ಕುಸಿತಗೊಂಡಿದ್ದವು. 13 ಜನ ಪ್ರಾಣ ಕಳೆದುಕೊಂಡರೆ, 2500ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು. ರಸ್ತೆಗಳು, ಸೇತುವೆಗಳು ಕೊಚ್ಚಿ ಹೋಗಿದ್ದವು. ಶಾಲೆಗಳು, ಅಂಗನವಾಡಿಗಳು, ಸರ್ಕಾರಿ ಕಾಲೇಜುಗಳು, ಸರ್ಕಾರಿ ಕಟ್ಟಡಗಳು ಹಾಳಾಗಿದ್ದವು.

ಕಾಫಿ ತೋಟ, ಎಕರೆ ತೋಟಗಾರಿಕೆ ಬೆಳೆ, ಕೃಷಿ ಬೆಳೆಗಳು ನಾಶವಾಗಿದ್ದವು. ಈ ಅನಾಹುತದಿಂದ ಚೇತರಿಸಿಕೊಳ್ಳಲು ತಡಕಾಡುತ್ತಿರುವಗಲೇ 2020ರಲ್ಲಿ ಮತ್ತೆ ಮಳೆ ಆರ್ಭಟಿಸಿ ಮತ್ತಷ್ಟು ಹಾನಿ ತಂದೊಡ್ಡಿತು. ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮಳೆ ಬರುವ ಮುನ್ನ ಒಂದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಳೆ ಎದುರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ. 

ಅತಿವೃಷ್ಟಿಯಾದರೆ ಹಾನಿ ಸಂಭವಿಸಬಹುದಾದ ಪ್ರದೇಶಗಳನ್ನು ಮೊದಲೇ ಗುರುತಿಸಿಕೊಂಡಿದೆ. ಕೆಲವು ಜನವಸತಿಗಳು ಸಂಪರ್ಕ ಕಡಿತಗೊಂಡರೆ, ಹಲವು ಗ್ರಾಮಗಳು ಸಂಪೂರ್ಣ ಜಲಾವೃತಗೊಳ್ಳುತ್ತವೆ. ಮಳೆ ಜೋರಾಗುವ ಮುನ್ಸೂಚನೆ ಕಂಡರೆ ಈ ರೀತಿ ತೊಂದರೆಗೆ ಸಿಲುಕುವ ಜನರನ್ನು ಸ್ಥಳಾಂತರ ಮಾಡಲು ಸಜ್ಜಾಗಿದೆ.

ಕಾಳಜಿ ಕೇಂದ್ರ, ಈಜುಗಾರರು ಮತ್ತು ಸ್ವಯಂ ಸೇವಕರ ತಂಡಗಳನ್ನು ರಚನೆ ಮಾಡಿಕೊಂಡಿದೆ. ಭೂಕುಸಿತವಾಗುವ ಸಂಭವ ಇರುವ 58 ಜಾಗ, 40 ಕಡೆ ಪ್ರವಾಹ ಎದುರಾಗುವ ಸ್ಥಳ, ನೀರು ತುಂಬಿಕೊಳ್ಳಬಹುದಾದ ಮೂರು ಪ್ರದೇಶಗಳನ್ನು ಗುರುತು ಮಾಡಿದೆ.

ಸ್ವಯಂ ಸೇವಕರ ‘ಆಪ್ತಮಿತ್ರ’ ತಂಡ
ಅನಾಹುತ ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ರಕ್ಷಣೆಗೆ ಬರಲು ಸ್ವಯಂ ಸೇವಕರ ತಂಡಗಳನ್ನೂ ಜಿಲ್ಲಾಡಳಿತ ರಚನೆ ಮಾಡಿದೆ. ಆಪ್ತಮಿತ್ರ ಎಂಬ ವಿಪತ್ತು ನಿರ್ವಹಣಾ ತಂಡಗಳಿಗೆ ತರಬೇತಿ ನೀಡಲಾಗಿದೆ. ಎಲ್ಲಾ ತಾಲ್ಲೂಕಿನಲ್ಲೂ ಈ ತಂಡಗಳಿದ್ದು ತುರ್ತು ಸಂದರ್ಭದಲ್ಲಿ ಜನರ ನೆರವಿಗೆ ಈ ತಂಡ ಬರಲಿದೆ. ಅಗ್ನಿ ಶಾಮಕ ಸಿಬ್ಬಂದಿ ಜತೆಗೆ ನುರಿತ ಈಜುಗಾರರು ಗೃಹ ರಕ್ಷಕ ಸಿಬ್ಬಂದಿಯನ್ನು ಸಂಪರ್ಕದಲ್ಲಿ ‌ಇರಿಸಿಕೊಳ್ಳಲಾಗಿದೆ. 81 ಈಜುಗಾರರು 510 ಸ್ವಯಂ ಸೇವಕರನ್ನು ಸಜ್ಜುಗೊಳಿಸಲಾಗಿದೆ. 505 ಲೈಫ್‌ ಜಾಕೆಟ್ 421 ಟಿಪ್ಪರ್ 95 ಜೆಸಿಬಿ 136 ಹಿಟಾಚಿ 148 ಟ್ರ್ಯಾಕ್ಟರ್‌ಗಳು ಲಭ್ಯ ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ‘ಮಳೆ ಹಾನಿ ಬಗ್ಗೆ 24 ಗಂಟೆಗಳಲ್ಲಿ ವರದಿ ನೀಡಲು ತೋಟಗಾರಿಕೆ ಕೃಷಿ ಕಾಫಿ ಮಂಡಳಿ ಸೇರಿ ವಿವಿಧ ಇಲಾಖೆಯ ತಂಡ ರಚನೆ ಮಾಡಲಾಗಿದೆ. ಹಾವು ಕಡಿದವರಿಗೆ ನೀಡುವ ಚುಚ್ಚುಮದ್ದು ಸಂಗ್ರಹಿಸಿಟ್ಟುಕೊಳ್ಳಲು ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಈ ಔಷಧ ದಾಸ್ತಾನಿರಬೇಕು ಎಂದು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಅಲ್ಲಲ್ಲಿ ಕಾಳಜಿ ಕೇಂದ್ರ
ಪ್ರತಿ ತಾಲ್ಲೂಕಿನಲ್ಲೂ ಕಾಳಜಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ಉದ್ದೇಶಿಸಿದ್ದು 72 ಸ್ಥಳಗಳನ್ನು ಗುರುತು ಮಾಡಿದೆ. ತೊಂದರೆಗೆ ಸಿಲುಕುವ ಜನರನ್ನು ಸ್ಥಳಾಂತರಿಸಿ ಅವರಿಗೆ ಆರೈಕೆ ಮಾಡಲು ಈ ಕೇಂದ್ರಗಳು ಕಾರ್ಯ ನಿರ್ವಹಿಸುಲಿವೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
137 ದುರ್ಬಲ ಪ್ರದೇಶ
ಮಳೆಗಾಲದಲ್ಲಿ ಗುಡ್ಡಕುಸಿತ ಸಂಪರ್ಕ ಕಡಿತದಂತಹ ಸಮಸ್ಯೆಗೆ ಸಿಲುಕಬಹುದಾದ 137 ದುರ್ಬಲ ಸ್ಥಳಗಳನ್ನು ಜಿಲ್ಲಾಡಳಿತ ಗುರುತು ಮಾಡಿದೆ. ಭೂಕುಸಿತ ಸಂಭವಿಸಬಹುದಾದ ಸ್ಥಳ ಪ್ರವಾಹ ಬರಬಹುದಾದ ಸ್ಥಳಗಳನ್ನು ಲೋಕೋಪಯೋಗಿ ಇಲಾಖೆ ಮೂಲಕ ಗುರುತು ಮಾಡಿಸಲಾಗಿದೆ.  ಶೃಂಗೇರಿ ತಾಲ್ಲೂಕಿನಲ್ಲಿ ಅತೀ ಹೆಚ್ಚು 51 ಪ್ರದೇಶಗಳನ್ನು ಗುರುತು ಮಾಡಲಾಗಿದೆ. ಮೂಡಿಗೇರೆ ತಾಲ್ಲೂಕಿನಲ್ಲಿ 28 ಎನ್.ಆರ್‌.ಪುರ ತಾಲ್ಲೂಕಿನಲ್ಲಿ 21 ಕೊಪ್ಪ ತಾಲ್ಲೂಕಿನಲ್ಲಿ 20 ಚಿಕ್ಕಮಗಳೂರು ತಾಲ್ಲೂಕಿನಲ್ಲಿ 9 ಕಡೂರು ತಾಲ್ಲೂಕಿನ 2 ಪ್ರದೇಶಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಅನಾಹುತ ತಡೆಯಲು 137 ಕಾರ್ಯಪಡೆ ತಂಡಗಳನ್ನೂ ರಚನೆ ಮಾಡಿದೆ. 
ಎಲ್ಲಾ ರೀತಿಯ ಮುನ್ನೆಚ್ಚರಿಕೆಗೆ ಕ್ರಮ: ಜಿಲ್ಲಾಧಿಕಾರಿ
ಮಳೆ ಅನುಹುತ ತಡೆಯಲು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ತಹಶೀಲ್ದಾರ್ ನೇತೃತ್ವದಲ್ಲಿ ತಾಲ್ಲೂಕುವಾರು ಸಭೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. ಒಣಗಿರುವ ಮರ ಮತ್ತು ಕೊಂಬೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ಅಗ್ನಿಶಾಮಕ ದಳದ ಬಳಿ ಇರುವ ಲೈಫ್ ಜಾಕೆಟ್ ಬೋಟ್ ಸೇರಿ ಎಲ್ಲಾ ಪರಿಕರಗಳು ಸರಿ ಇವೆಯೇ ಎಂದು ಪರಿಶೀಲಿಸಿ ವರದಿ ನೀಡಲು ಸೂಚನೆ ನೀಡಲಾಗಿದೆ.  ಪ್ರವಾಹ ಬಂದರೆ ಜನರನ್ನು ಸ್ಥಳಾಂತರ ಮಾಡಲು ಸುರಕ್ಷಿತ ಸ್ಥಳ ಸರ್ಕಾರಿ ಶಾಲೆ ಮತ್ತು ಸಮುದಾಯ ಭವನ ಕಟ್ಟಡಗಳನ್ನೂ ಗುರುತು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 260 ಸೇತುವೆಗಳಿದ್ದು ಅವುಗಳ ಸುರಕ್ಷತೆ ಪರಿಶೀಲಿಸಿ ವರದಿ ನೀಡಲು ಲೋಕೋಪಯೋಗಿ ಇಲಾಖೆಗೆ ತಿಳಿಸಲಾಗಿದೆ ಎಂದರು. ‘ಕೊಪ್ಪ ತಾಲ್ಲೂಕಿನ ಗುಡ್ಡೆತೋಟವು ಪ್ರಮುಖ ದುರ್ಬಲ ಪ್ರದೇಶವಾಗಿದೆ. ಅಲ್ಲಿರುವ ಜನ ಸ್ಥಳಾಂತರಕ್ಕೆ ಒಪ್ಪುತ್ತಿಲ್ಲ. ಒಂದು ಮನೆಯಂತೂ ಸ್ಥಳಾಂತರ ಮಾಡಲೇಬೇಕಾದ ಸ್ಥಿತಿಯಲ್ಲಿದೆ. ಜೋರು ಮಳೆ ಬಂದರೆ ಒತ್ತಾಯ ಪೂರ್ವಕವಾಗಿಯಾದರೂ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT