ಕಡೂರು: ಬರಗಾಲವು ಹೂ ಬೆಳೆಗಾರರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಎಷ್ಟೇ ನೀರುಣಿಸಿದರೂ ಹೆಚ್ಚುತ್ತಿರುವ ತಾಪಮಾನದಿಂದ ಹೂವಿನ ಗಿಡಗಳು ಸಾಯುತ್ತಿರುವುದು ಬೆಳೆಗಾರರಿಗೆ ನಿರಾಸೆ ಉಂಟುಮಾಡಿದೆ.
ಪಟ್ಟಣ ಸಮೀಪದ ಗ್ರಾಮಗಳಾದ ಲಕ್ಕಡಿಕೋಟೆ, ಸಿಗೇಹಡ್ಲು, ವಿ.ಸಿದ್ದರಹಳ್ಳಿ, ಕಾಮನಕೆರೆ ಭಾಗಗಳಲ್ಲಿ ಪುಷ್ಪ ಕೃಷಿ ಪ್ರಧಾನವಾಗಿದೆ. ಎರಡು ವಾರಗಳಿಂದ ಹೂವಿನ ಬೆಲೆ ಗಗನಕ್ಕೇರಿದ್ದರೂ ಅದರ ಲಾಭ ಬೆಳೆಗಾರರಿಗೆ ಸಿಗುತ್ತಿಲ್ಲ. 39 ಡಿಗ್ರಿಗೂ ಹೆಚ್ಚಿದ ಬಿಸಿಲನ್ನು ಹೂವಿನ ಗಿಡಗಳು ತಡೆಯತ್ತಿಲ್ಲ. ಆದ್ದರಿಂದ ಅರಳುವ ಸಂದರ್ಭದಲ್ಲಿ ಹೂಗಳು ಮುದುಡುತ್ತಿವೆ.
ಸ್ಥಳೀಯವಾಗಿ ಗುಣಮಟ್ಟದ ಹೂ ದೊರೆಯುತ್ತಿಲ್ಲ. ಗ್ರಾಹಕರ ಬೇಡಿಕೆಗೆ ತಕ್ಕಂತೆ ತುಮಕೂರು ದಾವಣಗೆರೆ ಭಾಗದಿಂದ ಹೂಗಳನ್ನು ತರಿಸಿಕೊಂಡು ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಲೋಹಿತ್, ಹೂವಿನ ವ್ಯಾಪಾರಿ ಕಡೂರು
ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಕಲರ್ ಬಟನ್ಸ್, ಚೆಂಡು ಹೂ ಪ್ರಮುಖವಾಗಿ ಇಲ್ಲಿ ಬೆಳೆಯಲಾಗುತ್ತಿದೆ. ಸುಮಾರು 60 ಎಕರೆ ಪ್ರದೇಶದಲ್ಲಿ ಸೇವಂತಿಗೆ ಹೂ ಬೆಳೆಯಲಾಗುತ್ತಿತ್ತು. ಇಲ್ಲಿ ಬೆಳೆದ ಹೂಗಳು ಶಿವಮೊಗ್ಗ, ಮೈಸೂರು, ಮಂಗಳೂರು ಮತ್ತಿತರ ಭಾಗಗಳಿಗೆ ರವಾನೆಯಾಗುತ್ತದೆ.
ಸಣ್ಣ ಹಾರದ ಬೆಲೆ ₹ 250, ದೊಡ್ಡ ಹಾರಕ್ಕೆ ₹ 350, ತೋಮಾಲೆ ₹ 1300, ಒಂದು ಮಾರು ಸೇವಂತಿಗೆ ₹ 120ರಿಂದ 150, ದುಂಡು ಮಲ್ಲಿಗೆಗೆ ₹ 80ರಷ್ಟು ಬೆಲೆ ಇದೆ.