ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗ್ರಾಮದ ಮುಖಂಡ ಭವಿತ್ ಮಾತನಾಡಿ, ‘ಕಳೆದ ಆರು ತಿಂಗಳುಗಳಿಂದ ಸಾರಗೋಡು ಮೀಸಲು ಅರಣ್ಯದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಪ್ರತಿನಿತ್ಯ ದೋಣಗುಡಿಗೆ, ಚಂಡಗೋಡು, ವಗರ್ ರಸ್ತೆ, ಕಂಚಿನ ಕಲ್ ದುರ್ಗ, ಬೆಳಗೋಡು, ಸಾರಳ್ಳಿ, ಗುಡ್ಡದೂರು ಮಾರ್ಗವಾಗಿ 40ರಿಂದ 50 ಟನ್ ಭಾರದ ಜಲ್ಲಿ ಮತ್ತು ಎಂಸ್ಯಾಂಡ್ ತುಂಬಿಕೊಂಡ ಟಿಪ್ಪರ್ಗಳು ನಿರಂತರವಾಗಿ ಸಂಚರಿಸುತ್ತವೆ. ಇದರಿಂದ ಗ್ರಾಮೀಣ ಭಾಗದ ಕಿರಿದಾದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅಕ್ಕಪಕ್ಕದ ಮನೆಗಳು ದೂಳುಮಯವಾಗಿ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹಳೆಯದಾದ ಸಾರಳ್ಳಿ ಹುಲಿಹಳ್ಳ ಸೇತುವೆಗೆ ಅಪಾಯವಾದರೆ, ಅನೇಕ ಗ್ರಾಮಗಳ ನಿವಾಸಿಗಳಿಗೆ ತೊಂದರೆಯಾಗುತ್ತದೆ’ ಎಂದರು.