ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಪರಿಹಾರದ ನಿರೀಕ್ಷೆಯಲ್ಲಿ 40 ಸಾವಿರ ರೈತರು

ಅಕಾಲಿಕ ಮಳೆ ಪರಿಹಾರವಾಗಿ ಮೊದಲ ಹಂತದಲ್ಲಿ ಸರ್ಕಾರದಿಂದ ₹ 11.86 ಕೋಟಿ ಬಿಡುಗಡೆ
Last Updated 1 ಜುಲೈ 2021, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ 2021ರ ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಭಾರಿ ಪ್ರಮಾಣದಲ್ಲಿ ಬೆಳೆ ನಷ್ಟವಾಗಿತ್ತು‌. ವಿವಿಧ ಬೆಳೆಗಳಿಗೆ ಹಾನಿ ಉಂಟಾಗಿತ್ತು. ಈ ಸಂಬಂಧ ಮೂರು ಸಾವಿರಕ್ಕೂ ಹೆಚ್ಚು ರೈತರಿಗೆ ಪರಿಹಾರ ದೊರೆತಿದೆ.

ಅಕಾಲಿಕ ಮಳೆಯಿಂದಾಗಿ ಉಂಟಾದ ಹಾನಿಗೆ ಸಂಬಂಧಿಸಿ 40 ಸಾವಿರಕ್ಕೂ ಹೆಚ್ಚು ರೈತರಿಗೆ ನಷ್ಟ ಉಂಟಾಗಿತ್ತು ಎಂದು ಅಂದಾಜಿಸಲಾಗಿದೆ. ಆ ಎಲ್ಲ ರೈತರು ಈಗಲೂ ಪರಿಹಾರದ ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚು ಹಾನಿಯಾದ ಪ್ರದೇಶಗಳಲ್ಲಿಯ ರೈತರ ಜಮೀನುಗಳಿಗೆ ಭೇಟಿ ನೀಡಿದ್ದ ಕಂದಾಯ, ಕೃಷಿ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಆಯಾ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳು ಅಂಕಿ–ಅಂಶಗಳ ಪ್ರಕಾರ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸಿದ್ದಾರೆ. ಪರಿಹಾರ ನೀಡುವಂತೆ ಕೃಷಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿ ಮೊದಲ ಹಂತದಲ್ಲಿ ₹ 11.86 ಕೋಟಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ.

ಬಹುನಿರೀಕ್ಷೆ ಹಾಗೂ ಉತ್ತಮ ಆರೈಕೆಯೊಂದಿಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ರೈತರು ಕಡಲೆ ಬೆಳೆದಿದ್ದರು. ಚಳ್ಳಕೆರೆ ತಾಲ್ಲೂಕಿನಲ್ಲೇ 200 ಹೆಕ್ಟೇರ್‌ ಪ್ರದೇಶ ಹಾಗೂ ಐಮಂಗಲ ಭಾಗದ 80 ಹೆಕ್ಟೇರ್‌ ಪ್ರದೇಶ ಮಳೆಯಿಂದಾಗಿ ಹಾನಿಯಾಗಿತ್ತು. ಇದು ಸೇರಿ ವಿವಿಧ ಧಾನ್ಯಗಳಿಗೆ ಹಾನಿ ಸಂಭವಿಸಿದೆ ಎಂಬ ಅಂದಾಜಿನ ಮಾಹಿತಿ ಆಧರಿಸಿ, ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸರ್ಕಾರಕ್ಕೆ ನಿಖರ ವರದಿಯನ್ನು ಸಲ್ಲಿಸಿದೆ. ಆ ಅವಧಿಯಲ್ಲೇ ಜಿಲ್ಲೆಯ ಉಳಿದ ಭಾಗಗಳಲ್ಲೂ ಕೂಡ ಹಾನಿ ಉಂಟಾಗಿತ್ತು.

‘ಅಕಾಲಿಕ ಮಳೆಯಿಂದಾಗಿ ಜಿಲ್ಲೆಯ ಸಾವಿರಾರು ರೈತರಿಗೆ ತೊಂದರೆಯಾಗಿದೆ. ಅದರಲ್ಲೂ ಕಡಲೆ ಬೆಳೆಗಾರರು ತುಂಬಾ ನಷ್ಟ ಅನುಭವಿಸಿದ್ದಾರೆ. ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಳಿದ ರೈತರಿಗೂ ತ್ವರಿತವಾಗಿ ಪರಿಹಾರ ನೀಡಿದರೆ ಅನುಕೂಲವಾಗಲಿದೆ’ ಎಂದು ಚಳ್ಳಕೆರೆಯ ರೈತ ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.

ವೈಜ್ಞಾನಿಕ ಪರಿಹಾರಕ್ಕೆ ಆಗ್ರಹ: ಅನೇಕ ತಿಂಗಳು ಪೋಷಿಸಿ, ಶ್ರಮಿಸಿ ಬೆಳೆದಿದ್ದ ಬೆಳೆಗಳು ಕ್ಷಣಮಾತ್ರದ ಮಳೆಯ ಹೊಡೆತಕ್ಕೆ ಸಿಲುಕಿ ಮಣ್ಣು ಪಾಲಾಗಿವೆ ಎಂದು ಕೆಲ ರೈತರು ನೋವು ತೋಡಿಕೊಂಡಿದ್ದಾರೆ. ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಬೆಳೆಹಾನಿಗೆ ಒಳಗಾದ ಎಲ್ಲ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂಬ ಕೂಗು ರೈತ ಸಮುದಾಯದಿಂದ ಕೇಳಿ
ಬರುತ್ತಿದೆ.

‘ಹೆಕ್ಟೇರ್‌ ಒಣ ಭೂಮಿಗೆ ₹ 6,800, ನೀರಾವರಿ ಭೂಮಿಗೆ ₹ 13,500 ಹಾಗೂ ಬೆಳೆ ಸಹಿತ ಭೂಮಿಗೆ ₹ 18 ಸಾವಿರ ಪರಿಹಾರದ ಮೊತ್ತವನ್ನು ಸರ್ಕಾರ ನಿಗದಿಗೊಳಿಸಿದೆ. ಇದರ ಅನ್ವಯ ಪರಿಹಾರ ಬಿಡುಗಡೆಯಾಗಲಿದೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್‌ಕುಮಾರ್.

‘ತಂತ್ರಾಂಶದಲ್ಲಿ ಈಗಾಗಲೇ ಆಧಾರ್ ಮತ್ತು ಬ್ಯಾಂಕ್‌ ಖಾತೆಯ ಮಾಹಿತಿಯನ್ನು ಜೋಡಣೆ ಮಾಡಿರುವ ರೈತರ ಖಾತೆಗಳಿಗೆ ನೇರವಾಗಿ ಪರಿಹಾರದ ಮೊತ್ತ ಜಮಾ ಆಗಲಿದೆ. ಹಂತ–ಹಂತವಾಗಿ ಸರ್ಕಾರದಿಂದ ಪರಿಹಾರ ಬಿಡುಗಡೆ ಆಗಲಿದೆ’ ಎನ್ನುತ್ತಾರೆ ಅವರು.

ಮೆಕ್ಕೆಜೋಳ: ₹ 27.67 ಕೋಟಿ ಬಿಡುಗಡೆ
2020ರಲ್ಲಿ ಮೆಕ್ಕೆಜೋಳ ಬೆಳೆದು ತೊಂದರೆಗೆ ಒಳಗಾದ ಹಾಗೂ ಕೋವಿಡ್ ಕಾರಣಕ್ಕೆ ಸೂಕ್ತ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸಿದ ಜಿಲ್ಲೆಯ ಸಾವಿರಾರು ರೈತರಿಗೆ ಪ್ರಸಕ್ತ ವರ್ಷ ಸರ್ಕಾರದಿಂದ ₹ 27.67 ಕೋಟಿ ಪರಿಹಾರದ ಮೊತ್ತ ಬಿಡುಗಡೆಯಾಗಿದೆ.

‘ಹಿಂದಿನ ವರ್ಷ ಮೆಕ್ಕೆಜೋಳದಿಂದ ನಷ್ಟ ಅನುಭವಿಸಿದ 55,340 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ತಲಾ ಒಬ್ಬರಿಗೆ ₹ 5 ಸಾವಿರದಂತೆ ಖಾತೆಗಳಿಗೆ ನೇರವಾಗಿ ಪರಿಹಾರ ಜಮಾ ಆಗಿದೆ’ ಎಂದು ರಮೇಶ್‌ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT