ಹಿರಿಯೂರು: ತಾಲ್ಲೂಕಿನ ತಾಲ್ಲೂಕಿನ ವಾಣಿ ವಿಲಾಸಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸುವಂತೆ ಜಾಗೃತಿ ಮೂಡಿಸುವ ಮೂಲಕ ಇಡೀ ಪಂಚಾಯ್ತಿಯನ್ನು ಬಯಲು ಶೌಚ ಮುಕ್ತ ಮಾಡುವತ್ತ ಜನಪ್ರತಿನಿಧಿಗಳು, ಅಧಿಕಾರಿಗಳು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಪಂಚಾಯ್ತಿ ವ್ಯಾಪ್ತಿಯ ಭರಮಗಿರಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದ ಗ್ರಾಮ ಪಂಚಾಯ್ತಿ ಸದಸ್ಯ ಉಮೇಶ್, ಪಿಡಿಒ ಹನ್ಸಿರಾಬಾನು ಶೌಚಾಲಯ ನಿರ್ಮಾಣ ಪ್ರಗತಿ ಪರಿಶೀಲನೆ ನಡೆಸಿದರು.
ಹಿಂದೆಲ್ಲ ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯಧನ ಪಡೆದು ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿದ್ದು ಉಂಟು. ಈಗ ಖುದ್ದು ಪರಿಶೀಲನೆ ಮಾಡಲಾಗುತ್ತಿದೆ. ಶೌಚಾಲಯಗಳಲ್ಲಿ ಕಟ್ಟಿಗೆ ಅಥವಾ ಮನೆಯ ತ್ಯಾಜ್ಯ ಹಾಕುವವರಿಗೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ತಿಂಗಳ ಅಂತ್ಯದ ಒಳಗೆ ನಮ್ಮ ಪಂಚಾಯ್ತಿ ಬಯಲು ಶೌಚಮುಕ್ತವಾಗುವ ಭರವಸೆ ಇದೆ ಎಂದು ಹನ್ಸಿರಾಬಾನು ಸುದ್ದಿಗಾರರಿಗೆ ತಿಳಿಸಿದರು.