ಚಿತ್ರದುರ್ಗ: ಕಾಂಗ್ರೆಸ್ ಹಾಗೂ ಜೆಡಿಎಸ್ ಭದ್ರಕೋಟೆಯಂತಿದ್ದ ಚಿತ್ರದುರ್ಗ ನಗರಸಭೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಾಡುತ್ತಿದೆ. ಸರಳ ಬಹುಮತ ಹೊಂದಿದ್ದ ಬಿಜೆಪಿ, ಪ್ರಥಮ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ.
ಭಾನುವಾರ ನಡೆದ ಚುನಾವಣೆಯಲ್ಲಿ ನಗರಸಭೆಯ ನೂತನ ಅಧ್ಯಕ್ಷೆಯಾಗಿ 19ನೇ ವಾರ್ಡ್ನ ತಿಪ್ಪಮ್ಮ ವೆಂಕಟೇಶ್ ಹಾಗೂ ಉಪಾಧ್ಯಕ್ಷೆಯಾಗಿ 28ನೇ ವಾರ್ಡ್ನ ಶ್ವೇತಾ ವೀರೇಶ್ ಅವಿರೋಧವಾಗಿ ಆಯ್ಕೆಯಾದರು.
ಪರಿಶಿಷ್ಟ ಪಂಗಡದ ಮಹಿಳೆಗೆ ಅಧ್ಯಕ್ಷ ಸ್ಥಾನ ಹಾಗೂ ಹಿಂದುಳಿದ ವರ್ಗ ‘ಎ’ಗೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ತಿಪ್ಪಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಶ್ವೇತಾ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಪ್ರತಿಸ್ಪರ್ಧಿಗಳು ಇಲ್ಲದಿರುವುದರಿಂದ ಅವಿರೋಧ ಆಯ್ಕೆ ನಡೆಯಿತು.
ನಗರಸಭೆಯ 35 ವಾರ್ಡ್ಗಳಿಗೆ 2018ರ ಆಗಷ್ಟ್ನಲ್ಲಿ ಚುನಾವಣೆ ನಡೆದಿತ್ತು. ಬಿಜೆಪಿ 17, ಪಕ್ಷೇತರ 7, ಜೆಡಿಎಸ್ 6 ಹಾಗೂ ಕಾಂಗ್ರೆಸ್ 5 ಸದಸ್ಯ ಬಲ ಹೊಂದಿದೆ. ಸರಳ ಬಹುಮತಕ್ಕೆ 19 ಮತಗಳ ಅಗತ್ಯವಿತ್ತು. ಪಕ್ಷೇತರರು ಬಿಜೆಪಿ ಬೆಂಬಲಿಸಿದ್ದರಿಂದ ಸರಳ ಬಹುಮತ ಪಡೆಯುವುದು ಬಿಜೆಪಿಗೆ ಕಷ್ಟವಾಗಲಿಲ್ಲ.