ಚಿತ್ರದುರ್ಗ: ಲಾಕ್ಡೌನ್ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ಕಾರ್ಮಿಕರು, ವೃತ್ತಿಪರ ಕಾರ್ಮಿಕರಿಗೆ ಸರ್ಕಾರ ₹ 2 ಸಾವಿರ ಪರಿಹಾರ ಘೋಷಿಸಿದ್ದು, ‘ಸೇವಾಸಿಂಧು’ ಮೂಲಕ ಅರ್ಜಿ ಸಲ್ಲಿಸಲು ಜುಲೈ 20 ಕೊನೆಯ ದಿನವಾಗಿದೆ.
ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ‘ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಉದ್ಯೋಗ ಪತ್ರ ವಿತರಿಸುವ ಅಧಿಕಾರಿಗಳು ಸಕಾಲಕ್ಕೆ ಪ್ರಮಾಣ ಪತ್ರ ನೀಡಬೇಕು’ ಎಂದು ಸೂಚನೆ ನೀಡಿದರು.
‘ಗೃಹ ಕೆಲಸದಲ್ಲಿ ತೊಡಗಿದ ಕಾರ್ಮಿಕರು, ಅಗಸರು, ಕ್ಷೌರಿಕರು, ಟೈಲರ್, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಮಂಡಕ್ಕಿ ಭಟ್ಟಿ ಸೇರಿ ಅಸಂಘಟಿತ ವಲಯದಲ್ಲಿ 11 ವಿಧದ ಕಾರ್ಮಿಕರು ಸೇರಿದ್ದಾರೆ’ ಎಂದರು.
‘ಇಎಸ್ಐ, ಇಪಿಎಫ್ ಕಾಯ್ದೆಯಡಿ ನೋಂದಾಯಿತ ಫಲಾನುಭವಿ ಆಗಿರಬಾರದು. 18 ರಿಂದ 65 ವರ್ಷದೊಳಗಿರಬೇಕು. ಕುಟುಂಬದಲ್ಲಿ ಒಬ್ಬರು ಮಾತ್ರ ಪಡೆಯಬಹುದು. ಬಿಪಿಎಲ್ ಕಾರ್ಡ್, ಆಧಾರ್ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಅರ್ಹ ಕಾರ್ಮಿಕರು ಸೇವಾಸಿಂಧು ಪೋರ್ಟಲ್ನ ಅರ್ಜಿ ನಮೂನೆಯಲ್ಲಿ ಮಾಹಿತಿ ಭರ್ತಿ ಮಾಡಿ ಅಪ್ಲೋಡ್ ಮಾಡಬೇಕು’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ. ನಂದಿನಿದೇವಿ, ಕಾರ್ಮಿಕ ಅಧಿಕಾರಿ ವಿನುತಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್ರೆಡ್ಡಿ, ಪೌರಾಯುಕ್ತ ಹನುಮಂತರಾಜು ಇದ್ದರು.