ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದಲ್ಲಿ ಶನಿವಾರ ನಡೆದ ‘ರಾಷ್ಟ್ರಮಟ್ಟದ ಜಯದೇವ ಜಂಗೀಕುಸ್ತಿ’ಯಲ್ಲಿ ಭದ್ರಾವತಿಯ ಕಿರಣ್ ಹಾಗೂ ಕೊಲ್ಲಾಪುರದ ಶುಭಂ ಸಮಬಲದ ಹೋರಾಟ ನಡೆಸಿ ‘ಚಿನ್ಮೂಲಾದ್ರಿ ಕೇಸರಿ’ ಪ್ರಶಸ್ತಿ ಜಂಟಿಯಾಗಿ ಪಡೆದುಕೊಂಡರು.
ಪ್ರಶಸ್ತಿಯೂ ತಲಾ ₹ 20 ಸಾವಿರ ನಗದು, ಪ್ರಶಸ್ತಿ ಪತ್ರ, ಪದಕ ಹಾಗೂ ಬೆಳ್ಳಿ ಗದೆ ಒಳಗೊಂಡಿದೆ. ಕರ್ನಾಟಕದ ಕೇಸರಿ ಕಿರಣ್ ಮತ್ತು ಭಾರತ ಕೇಸರಿ ಖ್ಯಾತಿಯ ಶುಭಂ ನಡುವಣ ನಡೆದ ಕುಸ್ತಿ ಮದಗಜಗಳ ಕಾದಾಟದಂತಿತ್ತು. ಆಕರ್ಷಕ ಪಟ್ಟುಗಳು, ತಂತ್ರಗಳು, ಮೈನವರೇಳಿಸುವ ಚಟುವಟಿಕೆಗೆ ಪ್ರೇಕ್ಷಕರು ಮನಸೋತರು.
ಅಂತಿಮ ಹಂತದಲ್ಲಿ ಕುಸ್ತಿ ರೋಚಕ ಘಟ್ಟ ತಲುಪಿತು.ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿತು. ಹಲವು ಸುತ್ತುಗಳಲ್ಲಿ ನಡೆದ ಈ ಪಂದ್ಯದಲ್ಲಿ ಇಬ್ಬರು ಸಮಬಲದ ಹೋರಾಟ ನಡೆಸಿ ಜಂಟಿಯಾಗಿ ಜಯಶಾಲಿಯಾದರು.