ಭರಮಸಾಗರ: ಇಲ್ಲಿನ ಚಿಕ್ಕಕೆರೆ ಏರಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸಾರ್ವಜನಿಕರನ್ನು ಆತಂಕಕ್ಕೆ ಒಳಗಾಗಿದ್ದಾರೆ.
ಈ ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, ಭರಮಸಾಗರ ಏತ ನೀರಾವರಿ ಯೋಜನೆಗೆ ಒಳಪಟ್ಟಿದೆ. ಈಚೆಗೆ ಭಾರಿ ಮಳೆಯಿಂದಾಗಿ ಕೆರೆ ಕೋಡಿ ಬಿದ್ದು, ನೀರು ರಸ್ತೆಯ ಮೇಲೆ ಹರಿದಿದ್ದರಿಂದ ಭರಮಸಾಗರ ಮತ್ತು ಬೇವಿನಹಳ್ಳಿ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿತ್ತು.
ಕೆರೆ ಹಿಂಭಾಗದ ಬೇವಿನಹಳ್ಳಿ ಗ್ರಾಮಸ್ಥರಿಗೆ ಭರಮಸಾಗರ ಸೇರಿದಂತೆ ಬೇರೆ ಊರುಗಳಿಗೆ ಹೋಗಿ ಬರಲು ಚಿಕ್ಕಕೆರೆ ಏರಿ ರಸ್ತೆ ಬಿಟ್ಟರೆ ಪರ್ಯಾಯ ಮಾರ್ಗ ಇಲ್ಲ. ಏರಿ ರಸ್ತೆ ಚಿಕ್ಕದಾಗಿದ್ದು, ಒಟ್ಟಿಗೆ ಎರಡು ವಾಹನಗಳು ಸಂಚರಿಸಲು ಕಷ್ಟಕರವಾಗಿದೆ. ತಡೆಗೋಡೆ ಇಲ್ಲದೇ ಇರುವುದರಿಂದ ವಾಹನಗಳು ನಿಯಂತ್ರಣ ತಪ್ಪಿದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ.
‘ಕೆರೆ ಏರಿ ರಸ್ತೆಯನ್ನು ವಿಸ್ತರಿಸಿ ತಡೆಗೋಡೆ ನಿರ್ಮಿಸಿ, ಕೋಡಿಬಳಿ ಎತ್ತರದ ಸೇತುವೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ಬೇವಿನಹಳ್ಳಿ ಗ್ರಾಮದ ಕುಬ್ಯನಾಯ್ಕ ಆರೋಪಿಸಿದರು.
‘10 ದಿನಗಳ ಹಿಂದೆ ಕೆರೆ ಏರಿಯ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಳ್ಳಲು ಆರಂಭವಾಗಿತ್ತು. ಈಗ ಬಿರುಕಿನ ಪ್ರಮಾಣ ಹೆಚ್ಚಾಗಿದ್ದು, ಸುಮಾರು 150 ಅಡಿ ಉದ್ದದವರೆಗೆ ರಸ್ತೆ ಒಂದೂವರೆ ಅಡಿ ಆಳದಷ್ಟು ಕುಸಿದಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದರೂ ಬೇರೆ ಮಾರ್ಗ ಇರದ ಕಾರಣ ವಿಧಿ ಇಲ್ಲದೆ ಈ ಮಾರ್ಗದಲ್ಲಿ ಸಂಚರಿಸುವುದು ಅನಿವಾರ್ಯವಾಗಿದೆ’ ಎಂದು ತಿಳಿಸಿದರು.