‘₹ 3 ಲಕ್ಷ ಖರ್ಚು ಮಾಡಿ ಒಂದೂವರೆ ಎಕರೆಯಲ್ಲಿ 1,500 ರೊಬೊಸ್ಟಾರ್–ಜಿ–9 ತಳಿಯ ಬಾಳೆ ನಾಟಿ ಮಾಡಿದ್ದೆ. ಮಾರ್ಚ್ನಿಂದ ಮೇ ತಿಂಗಳವರೆಗೆ ಪಚ್ಚ ಬಾಳೆಗೆ ಉತ್ತಮ ಬೇಡಿಕೆ ಇರುತ್ತದೆ ಎಂದು ಅದೇ ಸಮಯಕ್ಕೆ ಕೊಯ್ಲಿಗೆ ಬರುವಂತೆ ಬೆಳೆಸಿದ್ದೆ. ಕೊರೊನಾ ನನ್ನ ಎಲ್ಲ ಲೆಕ್ಕಾಚಾರಗಳನ್ನು ನುಚ್ಚುನೂರು ಮಾಡಿದೆ. ₹ 15ರಿಂದ ₹20ಕ್ಕೆ ಒಂದು ಕೆ.ಜಿಯಂತೆ ತೋಟಕ್ಕೇ ಬಂದು ಖರೀದಿಸುತ್ತಿದ್ದ ವರ್ತಕರನ್ನು, ‘ಎಷ್ಟಾದರೂ ಕೊಡಿ, ಬಾಳೆಗೊನೆ ಕಡಿದುಕೊಂಡು ಹೋಗಿ’ ಎಂದರೂ ಬರುತ್ತಿಲ್ಲ. ಗಿಡದಲ್ಲಿಯೇ ಹಣ್ಣಾಗಿ ಉದುರುತ್ತಿದ್ದವು. ಅಂತಿಮವಾಗಿ ಬೆಳೆಯ ಮೇಲೆ ಟ್ರ್ಯಾಕ್ಟರ್ ಹರಿಸಲು ತೀರ್ಮಾನಿಸಿದೆ’ ಎಂದು ಚಂದ್ರಗಿರಿ ಅಳಲು ತೋಡಿಕೊಂಡರು.