ಚಿತ್ರದುರ್ಗ: ಶೌಚಾಲಯ ಶುಚಿಗೊಳಿಸುವ ಆಸಿಡ್ 2ನೇ ತರಗತಿಯ ಬಾಲಕಿಯ ಮೇಲೆ ಬಿದ್ದು, ಗಾಯಗೊಂಡಿರುವ ಘಟನೆ ತಾಲ್ಲೂಕಿನ ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ.
ಗಾಯಗೊಂಡಿರುವ ಬಾಲಕಿ ಸಿಂಚನಾ (8) ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮುಖ್ಯ ಶಿಕ್ಷಕ ಜಿ.ರಂಗಸ್ವಾಮಿ ಅವರೇ ಆಸಿಡ್ ಎರಚಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಗುವಿನ ಮೇಲೆ ಆಸಿಡ್ ಆಕಸ್ಮಿಕವಾಗಿ ಬಿದ್ದಿದೆ. ಚಿಕಿತ್ಸೆಯ ಬಳಿಕ ಬಾಲಕಿ ಚೇತರಿಸಿಕೊಂಡಿದ್ದಾಳೆ. ಗ್ರಾಮಸ್ಥರೊಂದಿಗೆ ಶಿಕ್ಷಕರ ಬಾಂಧವ್ಯ ಸರಿಯಿಲ್ಲದ ಕಾರಣ ಆರೋಪ ಮಾಡಲಾಗುತ್ತಿದೆ.ನಾಗಭೂಷಣ್, ಬಿಇಒ, ಚಿತ್ರದುರ್ಗ
‘ದಸರಾ ರಜೆ ಮುಗಿದು ಬುಧವಾರದಿಂದ ಶಾಲೆ ಪ್ರಾರಂಭವಾಗಿತ್ತು. ಶಾಲಾ ಸಿಬ್ಬಂದಿ ಶೌಚಾಲಯ ಶುಚಿಗೊಳಿಸುವ ವೇಳೆ ಬಾಲಕಿಯ ಮೇಲೆ ಆಕಸ್ಮಿಕವಾಗಿ ಆಸಿಡ್ ಬಿದ್ದಿದೆ. ಬೆನ್ನ ಮೇಲೆ ಬೊಬ್ಬೆ ಎದ್ದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ’ ಎಂದು ತಾಲ್ಲೂಕು ಶಿಕ್ಷಣಾಧಿಕಾರಿ ನಾಗಭೂಷಣ್ ತಿಳಿಸಿದ್ದಾರೆ.
‘ಶೌಚಾಲಯ ಶುಚಿಗೊಳಿಸಲು ಬಾಲಕಿಯನ್ನು ಒತ್ತಾಯಿಸಲಾಗಿತ್ತು. ಇದನ್ನು ನಿರಾಕರಿಸಿದ ಮಗುವಿನ ಮೇಲೆ ಮುಖ್ಯ ಶಿಕ್ಷಕ ಆಸಿಡ್ ಎರಚಿದ್ದಾರೆ. ಅವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.