ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮನುಷ್ಯ ಕೊಳಕು ಜೀವನ ಕಳೆದುಕೊಳ್ಳಬೇಕು: ಪಂಡಿತಾರಾಧ್ಯ ಶ್ರೀ

Published 5 ಜೂನ್ 2024, 16:07 IST
Last Updated 5 ಜೂನ್ 2024, 16:07 IST
ಅಕ್ಷರ ಗಾತ್ರ

ಹೊಸದುರ್ಗ: ಆಂತರಿಕ ಪರಿಸರದಲ್ಲಿ ಒಳ್ಳೆಯ ಆಲೋಚನೆಗಳಿದ್ದರೆ ಬಾಹ್ಯ ಪರಿಸರ ಸ್ವಚ್ಛಗೊಳ್ಳಲು ಸಾಧ್ಯ. ಆಂತರಿಕ ಪರಿಸರದ ಶುದ್ಧಿಯೇ ಬಾಹ್ಯ ಪರಿಸರದ ಶುದ್ಧಿಗೆ ಸಹಕಾರಿಯಾಗುತ್ತದೆ. ಮನುಷ್ಯ ಮೊದಲು ಕೊಳಕು ಜೀವನ ಕಳೆದುಕೊಳ್ಳಬೇಕು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾಣೇಹಳ್ಳಿಯ ಶಿವಕುಮಾರ ವನದಲ್ಲಿ ಗಿಡ ನೆಟ್ಟು ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಪ್ಯಾಕೆಟ್‌ಗಳಲ್ಲಿ ದೊರೆಯುವ ಪದಾರ್ಥ ತಿನ್ನುವುದನ್ನು ಕಡಿಮೆ ಮಾಡಿದರೆ ಆರೋಗ್ಯ ಹಾಗೂ ಪರಿಸರ ಎರಡೂ ಕಾಪಾಡಿಕೊಂಡಂತೆ. ಇನ್ನು ಮುಂದೆ ಪ್ಯಾಕೆಟ್‌ ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ನಿಷೇಧ ಮಾಡುವ ಸಂಕಲ್ಪ ಮಾಡಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ಮಳೆ, ಬೆಳೆ ಚೆನ್ನಾಗಿ ಆಗಬೇಕೆಂದರೆ ಪ್ರತಿಯೊಬ್ಬರೂ ವರ್ಷಕ್ಕೆ ಒಂದು ಗಿಡವನ್ನಾದರೂ ನೆಟ್ಟು ಬೆಳೆಸಲು ಮುಂದಾಗಬೇಕು. ಸಾಣೇಹಳ್ಳಿಯ ಶಿವಕುಮಾರ ವನದಲ್ಲಿ ನಮ್ಮ ಸಮ್ಮುಖದಲ್ಲಿಯೇ ಕಳೆದ ನಾಲ್ಕಾರು ದಿನಗಳಿಂದ ಮಹಾಘನಿ, ಮಾವು, ತೇಗ, ನೇರಳೆ, ಹತ್ತಿ, ಪೇರಲ, ಸಂಪಿಗೆ, ಹಲಸು ವಿವಿಧ ಜಾತಿಯ 1,500 ಗಿಡಗಳನ್ನು ನಮ್ಮ ಶಾಲಾ ಮಕ್ಕಳು ಶ್ರಮದಾನದ ಮೂಲಕ ನೆಟ್ಟಿದ್ದಾರೆ. ಅಲ್ಲದೆ ಕಳೆದ ವರ್ಷ ನೆಟ್ಟಿದ್ದ ಸಾವಿರಾರು ಗಿಡ-ಮರಗಳಿಗೆ ಮಣ್ಣು, ನೀರು, ಗೊಬ್ಬರ ಮುಂತಾದ ಪೋಷಕಾಂಶಗಳನ್ನು ಒದಗಿಸಿದ್ದಾರೆ. ಈ ಎಲ್ಲ ಗಿಡಗಳು ನಳನಳಿಸುತ್ತಿದ್ದು, ನಿರೀಕ್ಷೆಗೂ ಮೀರಿದ ಬೆಳವಣಿಗೆ ಹೊಂದಿ ನೋಡುಗರ ಕಣ್ಮನ ಸೆಳೆಯುತ್ತಿವೆ’ ಎಂದರು.

ಅಧ್ಯಾಪಕರಾದ ಮಲ್ಲಿಕಾರ್ಜುನ, ವಿ.ಬಿ. ಚಳಗೆರೆ, ಶಿವಕುಮಾರ್ ಬಿ.ಎಸ್., ಸುಧಾ ಎಂ., ಮುಖ್ಯೋಪಾಧ್ಯಾಯರಾದ ಬಸವರಾಜ್, ಶಿಲ್ಪಾ, ಉಭಯ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT