ಭರಮಸಾಗರ: ಮೆಕ್ಕೆಜೋಳ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. 2019-20ನೇ ಸಾಲಿನ ಮೆಕ್ಕೆಜೋಳ ಬೆಳೆ ವಿಮೆ ಬಿಡುಗಡೆ ಮಾಡಬೇಕು. ರೈತರ ಹಾಲಿನ ದರವನ್ನು ಹೆಚ್ಚಿಸಬೇಕು ಹಾಗೂ ರೈತ ವಿರೋಧ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಅ.12ರಂದು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಮತ್ತು ಭರಮಸಾಗರ ಘಟಕ ನಡೆಯುವ ಪ್ರತಿಭಟನೆ ಸಂಬಂಧ ಶನಿವಾರ ನಡೆದ ಮನೆ ಮನೆಗೆ ಕರಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೇ ಬಂಡವಾಳವೂ ಸಿಗದಂತಾಗಿದೆ. ಕೇಂದ್ರ ಸರ್ಕಾರ₹ 1, 850 ಬೆಂಬಲ ಬೆಲೆ ನಿಗದಿಪಡಿಸಿದೆ ರಾಜ್ಯ ಸರ್ಕಾರ ಇದಕ್ಕೆ ₹ 150 ಸೇರಿಸಿ ₹ 2000 ನಿಗದಿಪಡಿಸಬೇಕು. ಕೂಡಲೇ ಖರೀದಿಕೇಂದ್ರಗಳನ್ನು ತೆರೆಯಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ನುಲೇನೂರು ಎಂ. ಶಂಕರಪ್ಪ, ರಾಜ್ಯ ಉಪಾದ್ಯಕ್ಷ ಕೆ.ಪಿ. ಭೂತಯ್ಯ ಸೇರಿ ಜಿಲ್ಲೆಯ ರೈತ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ತಾಲ್ಲೂಕು ಉಪಾಧ್ಯಕ್ಷ ಎಮ್ಮೇಹಟ್ಟಿ ಕೆಂಚಯಲ್ಲಪ್ಪ, ಕೋಗುಂಡೆ ರವಿ, ಪ್ರಸನ್ನಕುಮಾರ್, ಇಸಾಮುದ್ರ ಪ್ರಭು, ಓಬಳಾಪುರ ಶ್ರೀಧರ್, ಕೊಳಹಾಳು ರಮೇಶ್, ಮುದ್ದಾಪುರ ಸಿ. ನಾಗರಾಜ್ ಇದ್ದರು.