ಚಿತ್ರದುರ್ಗ: ‘ಪುಣ್ಯದ ಫಲವೇ ಸುಖ, ಪಾಪದ ಫಲವೇ ದುಃಖ. ಹಣ, ಅಧಿಕಾರ ಬಂದಿದೆ ಎಂದು ಹಿಗ್ಗಬೇಡಿ. ಅದೇ ರೀತಿ ಕಷ್ಟ ಬಂದಿದೆ ಎಂದು ಕುಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ ನೆಮ್ಮದಿಯ ಜೀವನ ಸಾಗಿಸಿ’ ಎಂದು ಜಗಳೂರಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನಾ, ಕಳಶ ಸ್ಥಾಪನಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮ ಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
‘ಪುಣ್ಯ ಮತ್ತು ಧರ್ಮ ಮಾತ್ರ ಮನುಷ್ಯನ ರಕ್ಷಣೆಗೆ ಬರುತ್ತವೆ. ಹಾಗಾಗಿ ಸಾಧ್ಯವಾದಷ್ಟು ಪುಣ್ಯ ಕಾರ್ಯ ಮಾಡುವ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ಧರ್ಮವನ್ನು ನೀವು ರಕ್ಷಣೆ ಮಾಡಿದರೆ ಅದು ನಿಮ್ಮನ್ನು ಸದಾ ಕಾಲ ಕೈಹಿಡಿದು ನಡೆಸುತ್ತದೆ’ ಎಂದು ಹೇಳಿದರು.
‘ಚಿತ್ರದುರ್ಗಕ್ಕೂ ಕಣ್ವಕುಪ್ಪೆ ಗವಿಮಠಕ್ಕೂ ವಿಶೇಷ ಬಾಂಧವ್ಯವಿದೆ. 21 ವರ್ಷಗಳ ಹಿಂದೆ ಇಲ್ಲಿ ನಿರ್ಮಾಣಗೊಂಡ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನ ಸಾಕಷ್ಟು ಅಭಿವೃದ್ಧಿ ಹೊಂದಿರುವುದೇ ಇದಕ್ಕೆ ಸ್ಪಷ್ಟ ನಿರ್ದಶನ’ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ಇದೇ ವೇಳೆ ಶಾಸಕರಿಗೆ ಬೆನಕನ ಬಳಗದಿಂದ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯಿತು. ಧರ್ಮ ಸಭೆಗೂ ಮುನ್ನ ಆಂಜನೇಯಸ್ವಾಮಿ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಪಂಚಾಮೃತ ಅಭಿಷೇಕ, ಗಣಹೋಮ, ಶ್ರೀ ರಾಮ ತಾರಕ ಹೋಮ, ಜಯಾ ಹೋಮ ಪೂರ್ಣಾಹುತಿ ಜರುಗಿದವು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ. ಸುರೇಶ್, ಪ್ರಾಧಿಕಾರದ ಸದಸ್ಯೆ ಎ. ರೇಖಾ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ವೆಂಕಟೇಶ್, ಶ್ರೀನಿವಾಸ್, ಅನುರಾಧ, ಭಾಗ್ಯಮ್ಮ, ಬೆನಕನ ಬಳಗದ ಮಹಿಳಾ ಕಮಿಟಿ ಅಧ್ಯಕ್ಷೆ ಪಾರ್ವತಮ್ಮ ಮಹದೇವಪ್ಪ ಇದ್ದರು.
ಚಿತ್ರದುರ್ಗದಲ್ಲಿ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಅಪಾರ ಭಕ್ತರು ಇದ್ದಾರೆ. ಇಲ್ಲಿ ಕಣ್ವಕುಪ್ಪೆ ಗವಿಮಠದ ಶಾಖಾ ಮಠ ಪ್ರಾರಂಭಿಸಿದರೆ ಭಕ್ತರಿಗೆ ಹಾಗೂ ಊರಿಗೆ ಒಳಿತಾಗುತ್ತದೆ.