ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಚಿದೇವಶ್ರೀ’ ಪ್ರಶಸ್ತಿಯೊಂದಿಗೆ ನೀಡಿದ ನಗದು ಹಿಂತಿರುಗಿಸಿದ ಸಿದ್ದರಾಮಯ್ಯ

ಹಿಂದುತ್ವದ ಹೆಸರಿನಲ್ಲಿ ಜಾತಿ ವ್ಯವಸ್ಥೆ ಪೋಷಣೆ; ವಿರೋಧ ಪಕ್ಷದ ನಾಯಕ ಆರೋಪ
Last Updated 6 ಜನವರಿ 2022, 13:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಿಂದುತ್ವದ ಹೆಸರಿನಲ್ಲಿ ಜಾತಿ ವ್ಯವಸ್ಥೆಯನ್ನು ಪೋಷಣೆ ಮಾಡುತ್ತಿವೆ. ಸ್ವಾರ್ಥ ಸಾಧನೆಗೆ ಜಾತಿಯನ್ನು ಬಳಸಿಕೊಳ್ಳುತ್ತಿವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.

ಇಲ್ಲಿನ ಮಡಿವಾಳ ಗುರುಪೀಠದಲ್ಲಿ ಬಸವ ಮಾಚಿದೇವ ಸ್ವಾಮೀಜಿ ಅವರ ನಾಲ್ಕನೇ ಪೀಠಾರೋಹಣ ಹಾಗೂ 38ನೇ ಜನ್ಮದಿನದ ಅಂಗವಾಗಿ ಗುರುವಾರ ನಡೆದ ‘ಕಾಯಕ ಜನೋತ್ಸವ’ದಲ್ಲಿ ‘ಮಾಚಿದೇವಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ‘ನಾವೆಲ್ಲರೂ ಹಿಂದೂಗಳೇ. ನಾನು ಹಿಂದೂ ಆಗದೇ ಇದ್ದಿದ್ದರೆ ನಮ್ಮಪ್ಪ ಸಿದ್ದರಾಮಯ್ಯ ಅಂತ ಹೆಸರು ಇಡುತ್ತಿರಲಿಲ್ಲ. ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ’ ಎಂದರು.

‘ಹಿಂದೂ ಧರ್ಮದಲ್ಲಿನ ಪಟ್ಟಭದ್ರರು ಶ್ರೇಣಿಕೃತ ವ್ಯವಸ್ಥೆಯನ್ನು ಸೃಷ್ಟಿಸಿದ್ದಾರೆ. ಚಾತುರ್ವರ್ಣ ನಿರ್ಮಿಸಿ ಮನುಸ್ಮೃತಿಯ ಮೂಲಕ ಧಾರ್ಮಕ ಚೌಕಟ್ಟು ಹಾಕಿದ್ದಾರೆ. ಶೂದ್ರರು ಮತ್ತು ಪಂಚಮರನ್ನು ಹೊರತುಪಡಿಸಿ ಉಳಿದವರು ಮಾತ್ರ ಶಿಕ್ಷಣ, ಆಸ್ತಿ ಹಕ್ಕು ಅನುಭವಿಸಿದರು. ನೂರಾರು ವರ್ಷ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವ ಪರಿಣಾಮ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿ ಅಸಮಾನತೆ ಎದುರಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಜಾತಿ ವ್ಯವಸ್ಥೆ ಅಳಿದು ಮಾನವೀಯ ಸಮಾಜ ರೂಪುಗೊಳ್ಳಬೇಕಿದೆ. ನಾನು ಜಾತಿ ವ್ಯವಸ್ಥೆಯ ಕಡು ವಿರೋಧಿ. ಆದರೆ, ಜಾತಿಯನ್ನು ಗುರುತಿಸಿ ಸಬಲೀಕರಣ ಮಾಡುವ ಮೂಲಕವೇ ಈ ವ್ಯವಸ್ಥೆಯನ್ನು ಕಿತ್ತುಹಾಕಬೇಕಿದೆ. ಜಾತಿ ಸಮ್ಮೇಳನ, ಜಾತಿ ಮಠ ಇಲ್ಲದಿದ್ದರೆ ಸಮುದಾಯ ಸಂಘಟಿತರಾಗಲು ಸಾಧ್ಯವಿಲ್ಲ. ಜಾತಿ ವ್ಯವಸ್ಥೆಯ ಗುಲಾಮಗಿರಿಯಿಂದ ಹೊರಬರಲು ಅಂಬೇಡ್ಕರ್‌ ಮಾರ್ಗವನ್ನು ಅನುಸರಿಸಬೇಕು’ ಎಂದು ಸಲಹೆ ನೀಡಿದರು.

‘ಬಸವಣ್ಣನವರು ಶೋಷಿತ ಸಮುದಾಯಗಳ ಪರವಾಗಿ ಹೋರಾಟ ಮಾಡಿದರು. ಬುದ್ಧ, ಬಸವ, ಅಂಬೇಡ್ಕರ್‌ ಸೇರಿ ಮಹನೀಯರೆಲ್ಲರೂ ಸಮಸಮಾಜದ ಕನಸು ಕಂಡಿದ್ದರು. ಶ್ರೇಣಿಕೃತ ವ್ಯವಸ್ಥೆ ಅಳಿಯಬೇಕು ಎಂದು ಶ್ರಮಿಸಿದ್ದರು. ಬಸವಣ್ಣನವರ ಆಶಯಗಳು ಅನುಷ್ಠಾನಕ್ಕೆ ಬಾರದಂತೆ ಕೆಲ ಶಕ್ತಿಗಳು ಕೆಲಸ ಮಾಡುತ್ತಿವೆ. ಧರ್ಮ, ಜಾತಿಯ ನೆಪದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಅಸ್ಪೃಶ್ಯರನ್ನು ದೂರ ಇಡುವುದು ಅಮಾನವೀಯ ಅಲ್ಲವೇ’ ಎಂದು ಪ್ರಶ್ನಿಸಿದರು.

‘ಮೊಸಳೆ ಕಣ್ಣೀರಿಗೆ ಕರಗಬೇಡಿ’
ಸಾಮಾಜಿಕ ನ್ಯಾಯದ ಪರವಾಗಿ ನಿಲ್ಲದವರು ಬದಲಾವಣೆಯ ವಿರೋಧಿಗಳು. ಅಂಥವರನ್ನು ನಂಬಬೇಡಿ; ಮೊಸಳೆ ಕಣ್ಣೀರು ಸುರಿಸುವವರಿಗೆ ಕರಗಬೇಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡುವ ಕಾನೂನು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರೂಪುಗೊಂಡಿದೆ. 2018ರಲ್ಲಿ ಮಂಡಿಸಿದ ಕೊನೆಯ ಬಜೆಟ್‌ ವೇಳೆ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆಗೆ (ಟಿಎಸ್‌ಪಿ) ₹ 30 ಸಾವಿರ ಕೋಟಿ ಮೀಸಲಿಡಲಾಗಿತ್ತು. ಆಗ ಬಜೆಟ್‌ ಗಾತ್ರ ₹ 2.3 ಲಕ್ಷ ಕೋಟಿ ಇತ್ತು. ಬಿಜೆಪಿ ಸರ್ಕಾರದಲ್ಲಿ ಬಜೆಟ್‌ ಗಾತ್ರ ₹ 2.47 ಲಕ್ಷ ಕೋಟಿಗೆ ಏರಿಕೆಯಾಗಿದೆ. ಆದರೆ, ಎಸ್‌ಸಿಪಿ–ಟಿಎಸ್‌ಪಿ ಅನುದಾನ ₹ 25 ಸಾವಿರ ಕೋಟಿಗೆ ಕುಸಿದಿದೆ’ ಎಂದು ವಿವರಿಸಿದರು.

ನಗದು ಹಿಂತಿರುಗಿಸಿದ ಸಿದ್ದರಾಮಯ್ಯ
‘ಮಾಚಿದೇವಶ್ರೀ’ ಪ್ರಶಸ್ತಿಯೊಂದಿಗೆ ನೀಡಿದ ನಗದಿಗೆ ಸಿದ್ದರಾಮಯ್ಯ ಅವರು ₹ 1 ಲಕ್ಷ ಸೇರಿಸಿ ಮಠಕ್ಕೆ ಹಿಂದಿರುಗಿಸಿದರು.

‘ಪ್ರಶಸ್ತಿಯು ₹ 1 ಲಕ್ಷ ನಗದು ಒಳಗೊಂಡಿರುವುದಾಗಿ ಶಾಸಕ ಭೀಮಾನಾಯ್ಕ ಗಮನಕ್ಕೆ ತಂದಿದ್ದಾರೆ. ಇದಕ್ಕೆ ವೈಯಕ್ತಿಕವಾಗಿ ₹ 1 ಲಕ್ಷ ಸೇರಿಸಿ ಮಠಕ್ಕೆ ಮರಳಿಸುತ್ತೇನೆ. ಮಠದಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಇದನ್ನು ವಿನಿಯೋಗಿಸಿ’ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ಇದಕ್ಕೆ ಸಂತಸದಿಂದ ಪ್ರತಿಕ್ರಿಯಿಸಿದ ಬಸವ ಮಾಚಿದೇವ ಸ್ವಾಮೀಜಿ, ‘ಇದನ್ನು ಬಡ ಮಕ್ಕಳ ವಿದ್ಯಾನಿಧಿಗೆ ಬಳಕೆ ಮಾಡಿಕೊಳ್ಳಲಾಗುವುದು’ ಎಂದರು.

ಶಾಸಕರಾದ ಬೈರತಿ ಸುರೇಶ್‌, ಟಿ.ರಘುಮೂರ್ತಿ, ಭೀಮಾನಾಯ್ಕ್‌, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಿ.ಸುಧಾಕರ್‌, ಉಪಾಮತಿ, ಬಿ.ಸೋಮಶೇಖರ್‌, ಯೋಗೇಶ್‌ ಬಾಬು, ಡಾ.ಎಚ್‌.ರವಿಕುಮಾರ್‌, ಎಚ್‌.ಎಂ.ಗೋಪಿಕೃಷ್ಣ, ರಾಜು ಎಂ.ತಲ್ಲೂರು, ಅಮರನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT