ಚಿತ್ರದುರ್ಗ: ಒನಕೆ ಓಬವ್ವ ಜಯಂತಿಯನ್ನು ನ.11ರಂದು ರಾಜ್ಯದಾದ್ಯಂತ ಆಚರಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
‘ಚಿತ್ರದುರ್ಗದ ಇತಿಹಾಸದಲ್ಲಿ ಒನಕೆ ಓಬವ್ವಳ ಹೆಸರು ಮರೆಯಲು ಸಾಧ್ಯವಿಲ್ಲ. ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಓಬವ್ವ ಒಬ್ಬರು ಎಂದು ಪರಿಗಣಿಸಲಾಗಿದೆ. ಓಬವ್ವಳ ಜನ್ಮದಿನವಾದ ನ.11ರಂದು ಜಯಂತಿ ಆಚರಣೆ ಮಾಡಬೇಕು’ ಎಂದು ಆದೇಶದಲ್ಲಿ ತಿಳಿಸಿದೆ.
‘18ನೇ ಶತಮಾನದಲ್ಲಿ ಚಿತ್ರದುರ್ಗದ ಪಾಳೆಗಾರ ಮದಕರಿನಾಯಕನ ಕೋಟೆಯ ಕಾವಲುಗಾರನಾಗಿದ್ದ ಮುದ್ದಹನುಮಪ್ಪನ ಪತ್ನಿ ಓಬವ್ವ. ಹೈದರಾಲಿ ಸೇನೆ ಕೋಟೆಯ ಮೇಲೆ ಆಕ್ರಮಣ ಮಾಡಿದಾಗ ಓಬವ್ವ ತನ್ನ ಒನಕೆಯನ್ನೇ ಅಸ್ತ್ರವನ್ನಾಗಿ ಬಳಸಿದಳು. ಕೋಟೆಯ ಕಿಂಡಿಯಿಂದ ನುಸುಳುತ್ತಿದ್ದ ಶತ್ರು ಸೈನಿಕರನ್ನು ಕೊಂದು ಹಾಕಿದಳು’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.