ಹೊಳಲ್ಕೆರೆ (ಚಿತ್ರದುರ್ಗ): ತಾಲ್ಲೂಕಿನ ವಿವಿಧೆಡೆ ಶನಿವಾರ ಮಧ್ಯಾಹ್ನ ಸುಮಾರು ಅರ್ಧ ಗಂಟೆ ಬಿರುಸಿನ ಮಳೆ ಸುರಿಯಿತು. ಬೇಸಿಗೆ ಬಿಸಿಲಿನ ಧಗೆ ಕಡಿಮೆಯಾಗಿದ್ದು, ಭೂಮಿ ತಂಪಾಯಿತು.
ಮಧ್ಯಾಹ್ನ 2.30 ಕ್ಕೆ ಗಾಳಿ, ಗುಡುಗಿನಿಂದ ಆರಂಭವಾದ ಮಳೆ ರಭಸವಾಗಿ ಸುರಿಯಿತು. ಇದರಿಂದ ಪಟ್ಟಣದ ರಸ್ತೆ ಹಾಗೂ ಚರಂಡಿಗಳಲ್ಲಿ ನೀರು ಹರಿಯಿತು. ಪಟ್ಟಣದಲ್ಲಿ ಸುರಿದ ವರ್ಷದ ಮೊದಲ ಮಳೆಯನ್ನು ಕಂಡು ನಾಗರಿಕರು ಹರ್ಷ ವ್ಯಕ್ತಪಡಿಸಿದರು.
ತಾಲ್ಲೂಕಿನ ಹೊರಕೆರೆ ದೇವರಪುರ, ಉಪ್ಪರಿಗೇನಹಳ್ಳಿ ಭಾಗದಲ್ಲೂ ಶನಿವಾರ ಮಧ್ಯಾಹ್ನ ಮಳೆ ಸುರಿದಿದೆ. ಮಳೆಯಿಂದ ಅಡಿಕೆ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ.