ಶಿವಮೊಗ್ಗ: ಜಿಲ್ಲೆಯ ಇಬ್ಬರಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ತಪ್ಪಿಸಿಕೊಂಡಿರುವ ಅವರನ್ನು ಹುಡುಕಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ತಾಲ್ಲೂಕಿನ ನಾರಾಯಣಪುರದ ಶಿಕ್ಷಕನ ವಿರುದ್ಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಕ್ಷಕ ನಾಗರಾಜ್ ನಾಯ್ಕ ಅವರು, ವೈರಸ್ ಪೀಡಿತರು ಸಿಗುವವರೆಗೂ ಜನರು ಶಿವಮೊಗ್ಗದ ಯಾವ ಆಸ್ಪತ್ರೆಗಳಿಗೂ ಭೇಟಿ ನೀಡಬಾರದು. ಮನೆಯಲ್ಲೇ ಇರಬೇಕು ಎಂದುವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಸಂದೇಶ ಹರಿಬಿಟ್ಟಿದ್ದರು.
ಇಂತಹ ಸುದ್ದಿಗಳನ್ನು ಹಬ್ಬಿಸಿದವರ ವಿರುದ್ಧ ಹಾಗೂ ವಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಎಚ್ಚರಿಸಿದ್ದಾರೆ.