ಕೇರಳೀಯರು ಕೃಷ್ಣನ ಆರಾಧನೆಯೊಂದಿಗೆ ವಿಷು ಆಚರಿಸಿದರು. ಮಂಗಳೂರಿನ ವಿವಿಧ ಭಾಗಗಳಲ್ಲಿ ವಾಸವಾಗಿರುವ, ಜಿಲ್ಲೆಯ ಹಲವು ಕಡೆ ಇರುವ ಮಲಯಾಳಿಗರು ಶನಿವಾರದಿಂದಲೇ ಸಂಭ್ರಮದಲ್ಲಿದ್ದರು. ರಸ್ತೆ ಬದಿಯಲ್ಲಿ ಬೆಳೆದಿರುವ ‘ಕೊನ್ನ ಪೂ’ ಕಿತ್ತುಕೊಳ್ಳುವ ದೃಶ್ಯ ಶನಿವಾರ ಸಾಮಾನ್ಯವಾಗಿತ್ತು. ಕನ್ನಡದಲ್ಲಿ ಕೊಂದೆ, ಕಕ್ಕೆ, ಸ್ವರ್ಣಪುಷ್ಪ ಎಂದೆಲ್ಲ ಕರೆಯುವ ಈ ಹೂ ವಿಷು ಕಣಿಗೆ ಅತ್ಯಗತ್ಯ. ಚಿನ್ನದ ಬಣ್ಣ ಸೂಸುವ ಹೂವಿನ ಗೊಂಚಲಿನೊಂದಿಗೆ ಚಿನ್ನ, ಹೊಸ ಬಟ್ಟೆ, ತರಕಾರಿ, ಹಣ್ಣು, ಹಣ ಇತ್ಯಾದಿಗಳನ್ನು ಒಳಗೊಂಡ ‘ಕಣಿ’ಯನ್ನು ಬೆಳಿಗ್ಗೆ ಎದ್ದ ನಂತರ ಮೊದಲು ನೋಡಬೇಕೆಂಬುದು ಹಿರಿಯರ ಆಶಯ.