ಬೆಳ್ತಂಗಡಿ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ವೇಳೆ ತಳಮಟ್ಟದಿಂದ ಪಕ್ಷವನ್ನು ಕಟ್ಟಿದ ಸಂದರ್ಭವನ್ನು ಉಲ್ಲೇಖಿಸಿ ಬೆಳ್ತಂಗಡಿಯ ಮಾಜಿ ಶಾಸಕ ಕೆ. ವಸಂತ ಬಂಗೇರರನ್ನು ನೆನಪಿಸಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಕೆ.ವಸಂತ ಬಂಗೇರ, ‘1985ರಲ್ಲಿ ಕರ್ನಾಟಕದಲ್ಲಿ ನಾನು ಮತ್ತು ಯಡಿಯೂರಪ್ಪ ಇಬ್ಬರೇ ಬಿಜೆಪಿಯಲ್ಲಿ ವಿಧಾನಸಭಾ ಸದಸ್ಯರಾಗಿದ್ದೆವು. ಆ ಸಂದರ್ಭ ಪಕ್ಷವನ್ನು ಕಟ್ಟುವಲ್ಲಿ ನಾವಿಬ್ಬರೇ ಒಗ್ಗಟ್ಟಾಗಿ ಹೋರಾಟ ಮಾಡಿದ್ದೆವು’ ಎಂದಿದ್ದಾರೆ.
‘ಯಡಿಯೂರಪ್ಪ ಹೋರಾಟದ ಮನೋಭಾವ ಉಳ್ಳವರು. ಪ್ರಾರಂಭದ ಹಂತದಿಂದ ಇಂದು ಕೂಡಾ ತಮ್ಮ ಹೋರಾಟವನ್ನು ಮುಂದುವರಿಸಿಕೊಂಡು ವಿಜಯಿಯಾಗಿದ್ದಾರೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ರಾಜೀನಾಮೆ ನೀಡುವ ಈ ಸಂದರ್ಭದಲ್ಲಿ ನನ್ನ ಹೆಸರು ಹೇಳುವ ಅವಶ್ಯಕತೆ ಇರಲಿಲ್ಲ. ಆದರೂ ಅವರು ನನ್ನನ್ನು ಎರಡೆರಡು ಬಾರಿ ನೆನಪಿಸಿಕೊಂಡಿದ್ದಾರೆ ಎಂದರೆ ನಾನು ತುಂಬಾ ಸಂತೋಷ ಪಡುತ್ತಿದ್ದೇನೆ’ ಎಂದಿದ್ದಾರೆ.
‘ನಾವು ಸುಮಾರು 8 ವರ್ಷಗಳ ಕಾಲ ಒಟ್ಟಿಗಿದ್ದೆವು. ಆಗ ಅವರು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಆಗಿರಲಿಲ್ಲ. ಶಾಸಕರಾಗಿದ್ದ ಅವರು ನನ್ನ ಜೊತೆ ತುಂಬಾ ಅನ್ಯೋನ್ಯತೆಯಿಂದ ಇದ್ದರು. ವಿಧಾನಸಭೆಯಲ್ಲಿ ನಾವಿಬ್ಬರೂ ಜೊತೆಯಾಗಿ ಹೋರಾಟ ಮಾಡುತ್ತಿದ್ದೆವು. ಯಡಿಯೂರಪ್ಪ ಈಗಲೂ ಹೋರಾಟದ ಮನೋಭಾವವನ್ನು ಮೈಗೂಡಿಸಿಕೊಂಡೇ ಇದ್ದಾರೆ’ ಎಂದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕುರಿತು ಪ್ರತಿಕ್ರಿಯಿಸಿ, ‘ಯಡಿಯೂರಪ್ಪ ಅವರು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.