ಸುಳ್ಯ: ಇಲ್ಲಿನ ಪಂಚಾಯಿತಿ ವ್ಯಾಪ್ತಿಯ ದುಗಲಡ್ಕ ಕಂದಡ್ಕಕ್ಕೆ ಬುಧವಾರ ರಾತ್ರಿ ಸಿ.ಡಿ.ಪಿ.ಒ. ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಬಾಲ್ಯವಿವಾಹವೊಂದನ್ನು ತಡೆದ ಘಟನೆ ನಡೆದಿದೆ.
ಕಂದಡ್ಕದ ತಮಿಳು ಕುಟುಂಬವೊಂದರ ಪ್ರತಾಪ ಎಂಬ 26 ವರ್ಷದ ಯುವಕನಿಗೆ ಗುರುವಾರ ಮೈಸೂರಿನ ಹುಡುಗಿಯೊಂದಿಗೆ ಮದುವೆ ನಡೆಯುವುದಿತ್ತು. ಈ ಹುಡುಗಿಗೆ 18 ವರ್ಷ ಆಗಿಲ್ಲ ಎಂದು ಜು.14 ರಂದು ಸಂಜೆ ಸಿ.ಡಿ.ಪಿ.ಒ.ರವರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
ಮಾಹಿತಿ ಬಂದ ಕೂಡಲೇ ಸಿ.ಡಿ.ಪಿ.ಒ. ರಶ್ಮಿ ಅಶೋಕ್ ಅವರು ಇಲಾಖೆಯ ಮೇಲ್ವಿಚಾರಕಿ ಹಾಗೂ ಸಹಾಯಕ ಮಕ್ಕಳ ಸಂರಕ್ಷಣಾಧಿಕಾರಿ ದೀಪಿಕಾ, ಗ್ರಾಮಕರಣಿಕ ತಿಪ್ಪೇಶ್, ನಾಲ್ಕು ಮಂದಿ ಪೊಲೀಸರ ಜತೆಗೆ ಕಂದಡ್ಕ ಎಂಬ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಆಗಲೇ ಮದುವೆಗೆ ಹುಡುಗಿ ಕಡೆಯವರು ಮೈಸೂರಿನಿಂದ ಆಗಮಿಸಿದ್ದರು.ಅವರ ಜೊತೆ ವಿಚಾರಿಸಿದಾಗ ಹುಡುಗಿಗೆ 18 ವರ್ಷ ತುಂಬಿರುವ ಬಗ್ಗೆ ದಾಖಲೆ ಸಲ್ಲಿಸಲು ಅವರಿಗೆ ಸಾಧ್ಯವಾಗಲಿಲ್ಲವೆಂದು ಗೊತ್ತಾಗಿದೆ. ಬಳಿಕ ಅಧಿಕಾರಿಗಳು ಬಾಲ್ಯವಿವಾಹದ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.