ಬಂಟ್ವಾಳ: ಇಲ್ಲಿನ ಕುಕ್ಕಿಪ್ಪಾಡಿ ಗ್ರಾಮದ ಯುವಕ ಧನೇಶ್ ಶೆಟ್ಟಿ ಇಂಡೊನೇಷ್ಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಊರಿನ ಜನರಲ್ಲಿ ಸಂಭ್ರಮ ಮನೆ ಮಾಡಿದೆ.
ಅವರು ಕುಕ್ಕಿಪ್ಪಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹುಣಸೆಬೆಟ್ಟು ಮಹಾಬಲ ಶೆಟ್ಟಿ ಅವರ ಪುತ್ರ.
ಇಂಡೊನೇಷ್ಯಾ ಆರೋಗ್ಯ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಧನೇಶ್ ಹಲವು ವರ್ಷಗಳಿಂದ ಪತ್ನಿಯೊಂದಿಗೆ, ಅಲ್ಲೇ ನೆಲೆಸಿದ್ದಾರೆ.
‘ಆರಂಭದಿಂದಲೇ ಕ್ರೀಡಾಸಕ್ತಿ ಹೊಂದಿದ್ದ ಧನೇಶ್ ಅವರಿಗೆ ಕ್ರಿಕೆಟ್ ಎಂದರೆ ಅಚ್ಚುಮೆಚ್ಚು. ಇಂಡೊನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ’ ಎಂದು ಮಹಾಬಲ ಶೆಟ್ಟಿ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.
ಅವರು ತಂಡದ ಬೌಲರ್ ಆಗಿದ್ದಾರೆ. ಈಚೆಗೆ ನಡೆದ ಇಂಡೋನೇಷ್ಯಾ– ಕಾಂಬೋಡಿಯಾ ನಡುವಿನ ಟ್ವೆಂಟಿ–20 ಟೂರ್ನಿಯ ನಾಲ್ಕು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಪಡೆದಿದ್ದರು.