ಮೀನಿನ ಬಲೆ ರಾಶಿಗೆ ಬೆಂಕಿ: ಅಪಾರ ನಷ್ಟ

ಮಂಗಳೂರು: ಮೀನು ಹಿಡಿಯಲು ಬಳಸಿದ ಹಳೆಯ ಬಲೆಗಳು ಮತ್ತು ದುರಸ್ತಿಗೆ ತಂದಿರಿಸಿದ್ದ ಬಲೆಯ ರಾಶಿಗೆ ಬೆಂಕಿ ಬಿದ್ದು ಹೊತ್ತಿ ಉರಿದ ಘಟನೆ ನಗರದ ಮೀನುಗಾರಿಕೆ ದಕ್ಕೆಯಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ. ಇದರಿಂದ ಲಕ್ಷಾಂತರ ಮೊತ್ತದ ನಷ್ಟ ಸಂಭವಿಸಿದೆ.
ಬೋಟ್ ನಿರ್ಮಾಣ ಯಾರ್ಡ್ ಬಳಿ ಇರಿಸಿದ್ದ ಬಲೆಗಳಿಗೆ ರಾತ್ರಿ 11.30ರ ವೇಳೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ತಕ್ಷಣ ರಾಶಿಗೆ ಬೆಂಕಿ ಹರಡಿದೆ. ಸ್ಥಳಕ್ಕೆ ಧಾವಿಸಿದ ಪಾಂಡೇಶ್ವರ ಆಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಯಾರೋ ಬೀಡಿ ಸೇದಿ ಎಸೆದಾಗ ಬೆಂಕಿ ಹೊತ್ತಿರುವ ಸಾಧ್ಯತೆ ಇದೆ. ದುರಸ್ತಿಗೆ ಬಂದ ಬಲೆಗಳಿಗೆ ₹ 60 ಸಾವಿರರಿಂದ ₹ 2 ಲಕ್ಷ ಮೌಲ್ಯದ ವರೆಗೆ ಬೆಲೆ ಇದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟ ಆಗಿರುವ ಸಾಧ್ಯತೆ ಇದೆ ಎಂದು ಮೀನುಗಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಕಂಕನಾಡಿ: ಬೀದಿಬದಿ ವ್ಯಾಪಾರ ತೆರವು
ಮಂಗಳೂರು: ನಗರದ ಕಂಕನಾಡಿಯ ಮುಖ್ಯರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದವರ ಅಂಗಡಿಗಳನ್ನು ಭಾನುವಾರ ಸಂಜೆ ತೆರವುಗೊಳಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯ ಸೂಚನೆ ಮೇರೆಗೆ ಜೆಸಿಬಿ ಬಳಸಿ ಗೂಡಂಗಡಿ, ಸಂಚಾರಿ ಹೋಟೆಲ್ ನಡೆಯುತ್ತಿದ್ದ ಟೆಂಪೊ ಸಹಿತ 8 ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ. ಫಾಸ್ಟ್ಫುಡ್, ಹಣ್ಣುಗಳ ವ್ಯಾಪಾರವೂ ಇದರಲ್ಲಿ ಸೇರಿದೆ.
‘ಕಂಕನಾಡಿಯ ವೆಲೆನ್ಸಿಯಾ ರಸ್ತೆಯುದ್ದಕ್ಕೂ ಅನಧಿಕೃತ ಅಂಗಡಿಗಳಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ತೆರವು ಮಾಡಲಾಗಿದೆ. ಅಂಗಡಿಯ ಮಾಲೀಕರಿಗೆ ಈ ಬಗ್ಗೆ ಮೊದಲೇ ತಿಳಿಸಲಾಗಿತ್ತು’ ಎಂದು ಮಂಗಳೂರು ಮಹಾನಗರಪಾಲಿಕೆಯ ಆರೋಗ್ಯ ನಿರೀಕ್ಷಕರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.