ಮಂಗಳೂರು: ಕರಾವಳಿಯಲ್ಲಿ ಸೆಪ್ಟೆಂಬರ್ 1 ರಿಂದ ಮೀನುಗಾರಿಕೆ ಆರಂಭಿಸಲು ನಗರದಲ್ಲಿ ಬುಧವಾರ ನಡೆದ ಮೀನುಗಾರರ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮೀನುಗಾರಿಕೆಯ ನಿಷೇಧದ ಅವಧಿ ಇದೇ 31 ಕ್ಕೆ ಮುಕ್ತಾಯವಾಗಿ, ಆಗಸ್ಟ್ 1ರಿಂದ ಆರಂಭವಾಗಬೇಕಾಗಿತ್ತು. ಆದರೆ, ಕೋವಿಡ್–19 ಸಂಕಷ್ಟದಿಂದಾಗಿ ನಿಷೇಧವನ್ನು ಒಂದು ತಿಂಗಳು ಮುಂದೂಡುವುದು ಅನಿವಾರ್ಯ ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
‘ವಿವಿಧ ಸಂಘಟನೆಗಳ ಸಭೆ ಕರೆದು, ಮೀನುಗಾರಿಕೆ ಪ್ರಾರಂಭಿಸುವ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ಅನೇಕ ವಿಷಯಗಳ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದೇ ಇರುವುದರಿಂದ ಸೆಪ್ಟೆಂಬರ್ 1 ರವರೆಗೆ ಮುಂದೂಡಲು ನಿರ್ಧರಿಸಲಾಗಿದೆ’ ಎಂದು ಟ್ರಾಲ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ನಿತಿನ್ಕುಮಾರ್ ತಿಳಿಸಿದ್ದಾರೆ.
‘ಜಿಲ್ಲೆಯಲ್ಲಿ 1,200 ಮೀನುಗಾರಿಕೆ ಬೋಟ್ಗಳಿದ್ದು, ಶೇ 75 ರಷ್ಟು ಕಾರ್ಮಿಕರು ತಮಿಳುನಾಡು, ಆಂಧ್ರಪ್ರದೇಶ, ಜಾರ್ಖಂಡ, ಒಡಿಶಾ ರಾಜ್ಯದವರು. ಮೀನುಗಾರಿಕೆ ಆರಂಭಿಸಲು ಈ ಕಾರ್ಮಿಕರು ಮಂಗಳೂರಿಗೆ ಬರಬೇಕಿದೆ’ ಎಂದು ಹೇಳಿದ್ದಾರೆ.
‘ಅಲ್ಲದೇ ಸುರಕ್ಷಿತ ಮೀನುಗಾರಿಕೆ ನಡೆಸಲು ಅಗತ್ಯ ಮಾರ್ಗಸೂಚಿಗಳನ್ನು ತಯಾರಿಸಬೇಕಾಗಿದೆ. ಈ ಕಾರ್ಯಯೋಜನೆಯೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಚರ್ಚಿಸಲಾಗುವುದು. ಇದರ ಜತೆಗೆ ಬೋಟ್ಗಳಲ್ಲಿ ಧಕ್ಕೆಗೆ ತರುವ ಮೀನಿನ ನಿರ್ವಹಣೆ, ಸಾಗಣೆ ಹಾಗೂ ಮಾರಾಟದ ಕುರಿತೂ ಯೋಜನೆ ರೂಪಿಸಬೇಕಾಗಿದೆ’ ಎಂದು ತಿಳಿಸಿದ್ದಾರೆ.
‘ಸದ್ಯಕ್ಕೆ ಮೀನು ವಹಿವಾಟು ಆರಂಭವಾದಲ್ಲಿ ಜನದಟ್ಟಣೆ ಹಾಗೂ ಸುರಕ್ಷಿತ ಅಂತರವನ್ನು ಕಾಪಾಡುವುದು ಕಷ್ಟಕರವಾಗಲಿದೆ. ಅಲ್ಲದೇ ಕೋವಿಡ್–19 ಪ್ರಕರಣಗಳಿಂದಾಗಿ ಬಂದರು ಪ್ರದೇಶವನ್ನು ಸೀಲ್ಡೌನ್ ಮಾಡಿದಲ್ಲಿ, ಮೀನುಗಾರರು ಭಾರಿ ನಷ್ಟ ಅನುಭವಿಸುವ ಆತಂಕವೂ ಇದೆ’ ಎಂದು ಅಭಿಪ್ರಾಯಪಟ್ಟರು.
‘ಮೀನುಗಾರಿಕೆಗೆ ತೆರಳುವ ಶೇ 25 ರಷ್ಟು ಬೋಟ್ಗಳಾದರೂ ಅದೇ ದಿನ ಬಂದರಿಗೆ ಮರಳುವಂತೆ ನೋಡಿಕೊಳ್ಳಬೇಕು ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದರು. ಆದರೆ, ವಾಸ್ತವದಲ್ಲಿ ಇದು ಸಾಧ್ಯವಿಲ್ಲ. ಆಳ ಸಮುದ್ರದ ಮೀನುಗಾರಿಕೆ ಮಾಡುವ ಬೋಟ್ಗಳಲ್ಲಿ 8–10 ಜನರ ತಂಡ ಇರಲಿದ್ದು, 10 ದಿನಗಳವರೆಗೆ ಸಮುದ್ರದಲ್ಲಿ ಮೀನು ಹಿಡಿಯುತ್ತದೆ. ಯಾಂತ್ರೀಕೃತ ಬೋಟ್ಗಳು ಮೂರು ದಿನಕ್ಕೆ ಬಂದರಿಗೆ ಹಿಂದಿರುಗುತ್ತವೆ. ಕೆಲವು ಪರ್ಸಿನ್ ಬೋಟ್ಗಳು ಮಾತ್ರ ಅದೇ ದಿನ ಬಂದರಿಗೆ ಮರಳಲು ಸಾಧ್ಯವಿದೆ’ ಎಂದು ವಿವರಿಸಿದರು.
ಟ್ರಾಲ್ ಬೋಟ್, ಪರ್ಸಿನ್ ಬೋಟ್, ಮೀನು ಮಾರಾಟಗಾರರು, ಮೀನು ರಫ್ತು ಕಂಪನಿಗಳ ಪ್ರತಿನಿಧಿಗಳು, ಫಿಶ್ ಮಿಲ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.