ಮಂಗಳೂರು: ಹನುಮ ಜಯಂತಿ ಅಂಗವಾಗಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜಿಲ್ಲೆಯ ವಿವಿಧೆಡೆ ಸಾಮೂಹಿಕ ಗದಾಪೂಜೆ ನಡೆಯಿತು.
ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಿಗ್ಗೆ ವಿವಿಧೆಡೆಗಳಲ್ಲಿ ಕಾರ್ಯಕ್ರಮಗಳು ನಡೆದವು. ಶಂಖನಾದದೊಂದಿಗೆ ಆರಂಭವಾಗಿ, ನಂತರ ಗದಾಪೂಜೆ ಅನುಷ್ಠಾನ, ಮಾರುತಿ ಆರತಿ, ಹನುಮಾನ ಚಾಲೀಸಾ ಪಠಣದೊಂದಿಗೆ ಸಾಮೂಹಿಕ ಜಪ ಮಾಡಲಾಯಿತು. ರಾಮರಾಜ್ಯ ಸ್ಥಾಪನೆಗಾಗಿ ಸಾಮೂಹಿಕ ಪ್ರತಿಜ್ಞೆ ಸ್ವೀಕರಿಸಲಾಯಿತು.
ಮಂಗಳೂರಿನ ಆಂಜನೇಯ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕ ವಿಜಯ ಕುಮಾರ್ ಮಾತನಾಡಿ, ‘ಯುಗಗಳಿಂದ ಮಾರುತಿಯ ಗದೆಯನ್ನು ಶೌರ್ಯದ ಪ್ರತೀಕವಾಗಿ ಗುರುತಿಸಲಾಗುತ್ತದೆ. ಹನುಮನು ದೈವಿ ಗದೆಯಿಂದ ಶಕ್ತಿಶಾಲಿ ರಾಕ್ಷಸರನ್ನು ಸಂಹರಿಸಿದ್ದನು’ ಎಂದರು.
‘ಮಹಾಭಾರತದ ಯುದ್ಧದಲ್ಲಿಯೂ ಮಾರುತಿಯು ಅರ್ಜುನನ ರಥದ ಮೇಲೆ ಕುಳಿತು ಪಾಂಡವರಿಗೆ ಧರ್ಮಯುದ್ಧವನ್ನು ಗೆಲ್ಲಲು ದೈವಿ ಸಹಾಯ ಮಾಡಿದ್ದ. ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯದ ಸ್ಥಾಪನೆಗಾಗಿ ಸಮರ್ಥ ರಾಮದಾಸ ಸ್ವಾಮಿಗಳು 11 ಮಾರುತಿ ಸ್ಥಾಪನೆ ಮಾಡಿ ಮಾವಳರಿಗೆ (ಶಿವಾಜಿ ಮಹಾರಾಜರ ಸೈನಿಕರಿಗೆ) ಬಲ ಪ್ರಾಪ್ತಿ ಮಾಡಿಕೊಟ್ಟಿದ್ದರು. ಈಗ 500 ವರ್ಷಗಳ ನಂತರ ಪುನಃ ಅಯೋಧ್ಯೆಯಲ್ಲಿ ಶ್ರೀರಾಮ ವಿರಾಜಮಾನನಾಗಿದ್ದಾನೆ. ಇಂತಹ ಸಮಯದಲ್ಲಿ ರಾಮರಾಜ್ಯವನ್ನು ಮತ್ತೆ ಸ್ಥಾಪಿಸಲು ಮಾರುತಿಯ ಭಕ್ತಿ ಹಾಗೂ ವೀರತೆ ಅವಶ್ಯವಾಗಿದೆ’ ಎಂದರು.
ಹನುಮ ಜಯಂತಿ ಅಂಗವಾಗಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮಂಗಳೂರಿನಲ್ಲಿ ಗದಾಪೂಜೆ ನಡೆಸಲಾಯಿತು