ಮಂಗಳೂರು: ಭಾರತೀಯ ರೋಗಶಾಸ್ತ್ರಜ್ಞರು ಮತ್ತು ಸೂಕ್ಷ್ಮಜೀವ ವಿಜ್ಞಾನಿಗಳ ಸಂಘದ ಕರ್ನಾಟಕ ವಿಭಾಗದ ವತಿಯಿಂದ ರಾಜ್ಯ ಮಟ್ಟದ ಪೆಥಾಲಜಿ ಸಮ್ಮೇಳನ ‘ಕ್ಯಾಪಕಾನ್ 2023’ ಅನ್ನು ಅ. 5ರಿಂದ 8ರವರೆಗೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಲೇಜಿನ ಪೆಥಾಲಜಿ ವಿಭಾಗದ ಮುಖ್ಯಸ್ಥ ಡಾ. ಉಮಾಶಂಕರ್, ಸಮ್ಮೇಳನದ ಅಂಗವಾಗಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಮತ್ತು ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಅ. 5ರಂದು ವಿವಿಧ ವಿಷಯಗಳ ಕುರಿತು ಏಳು ಕಾರ್ಯಾಗಾರಗಳು ನಡೆಯಲಿವೆ ಎಂದರು.
ರೋಗ ವಿಜ್ಞಾನ ಕ್ಷೇತ್ರದ ಪ್ರಮುಖ ಭಾಷಣಕಾರರು ಭಾಗವಹಿಸಲಿದ್ದಾರೆ. 350 ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ. ಸುಧಾರಿತ ಪ್ರಯೋಗಾಲಯ ಉಪಕರಣಗಳು, ರೋಗನಿರ್ಣಯ ಉಪಕರಣಗಳು, ವೈದ್ಯಕೀಯ ತಂತ್ರಜ್ಞಾನಗಳ ಪ್ರದರ್ಶನ ಇರಲಿದೆ. ಅ.6ರ ಸಂಜೆ 4.30ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸ್ ನಿರ್ದೇಶಕ ಡಾ.ಬಿ.ಎಸ್. ಸತೀಶ್ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಯ ನಿರ್ದೇಶಕ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಸಂಘಟನಾ ಕಾರ್ಯದರ್ಶಿ ಡಾ. ನಿಶಾ ಮಾರ್ಲ, ಜಂಟಿ ಸಂಘಟನಾ ಕಾರ್ಯದರ್ಶಿ ಡಾ. ರೇಷ್ಮಾ ಕಿಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.