ಶಿವಮೊಗ್ಗ: ಮಂಗಳೂರಿನಲ್ಲಿ ಆಟೊದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತ ಶಾರಿಕ್ ನ ತೀರ್ಥಹಳ್ಳಿಯ ಮನೆಗೆ ಪೊಲೀಸರ ತಂಡ ಸೋಮವಾರ ಬೆಳಿಗ್ಗೆ ತೆರಳಿ ಪರಿಶೀಲನೆ ನಡೆಸಿದೆ.
ಶಾರೀಕ್ ಮತ್ತು ಸಂಬಂಧಿಕರ ನಾಲ್ಕು ಮನೆಗಳಿಗೆ ಪೊಲೀಸರ ತಂಡ ಭೇಟಿ ನೀಡಿತ್ತಯ. ಸುಮಾರು 15 ಜನರನ್ನ ವಿಚಾರಣಿಗೆ ಒಳಪಡಿಸಲಾಗಿದೆ.
ಆಗುಂಬೆ ಪಿಎಸ್ಐ ಶಿವಕುಮಾರ್, ಮಾಳೂರು ಪಿಎಸ್ಐ ನವೀನ್ ಕುಮಾರ್ ಮಠಪತಿ, ತೀರ್ಥಹಳ್ಳಿ ಇನ್ ಸ್ಪೆಕ್ಟರ್ ಅಶ್ವಥ್ ಗೌಡ, ಮಾಳೂರು ಸರ್ಕಲ್ ಇನ್ ಸ್ಪೆಕ್ಟರ್ ಪ್ರವೀಣ್ ನೀಲಮ್ಮನವರ್ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿತ್ತು.
ಮಂಗಳೂರಿನಲ್ಲಿ ಆಟೊದಲ್ಲಿ ನಡೆದ ಸ್ಪೋಟದಲ್ಲಿ ಗಾಯಗೊಂಡಿರುವುದು ಶಾರಿಕ್ ಎಂದು ಪೊಲೀಸರು ಗುರುತಿಸಿದ್ದು, ಹೀಗಾಗಿ ಆತನ ಕುಟುಂಬದವರು ಭಾನುವಾರ ರಾತ್ರಿಯೇ ಮಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.
ಅದರ ಬೆನ್ನಲ್ಲೇ ಶಾರಿಕ್ ಮನೆಗೆ ತೆರಳಿ ಪೊಲೀಸರ ತಂಡ ಪರಿಶೀಲನೆ ನಡೆಸಿದೆ. ತೀರ್ಥಹಳ್ಳಿಯ ಬಾಳೆಬೈಲಿನಲ್ಲಿ ಒಂದು ಮನೆ ಮತ್ತು ಸೊಪ್ಪುಗುಡ್ಡೆಯಲ್ಲಿ ಮೂರು ಮನೆಗಳನ್ನು ತಪಾಸಣೆ ನಡೆಸಲಾಗಿದೆ.
ಶಾರಿಕ್ ಕುಟುಂಬದವರು ಆಸ್ಪತ್ರೆಗೆ ಭೇಟಿ
ಮಂಗಳೂರು: ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ನಿವಾಸಿ ಶಾರಿಕ್ ಅವರ ಕುಟುಂಬ ವರ್ಗದವರನ್ನು ಇಲ್ಲಿಗೆ ಬಂದಿದ್ದು, ಸೋಮವಾರ ಬೆಳಿಗ್ಗೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಂಬ್ ಸ್ಫೋಟದ ಆರೋಪಿಯನ್ನು ಭೇಟಿಯಾದರು.
ಬಾಂಬ್ ಸ್ಫೋಟದ ಆರೋಪಿ ತೀರ್ಥಹಳ್ಳಿಯ ಶಾರಿಕ್ ಇರಬಹುದು ಎಂಬ ಶಂಕೆಯ ಮೇರೆಗೆ ಪೊಲೀಸರು, ಅವರ ಕುಟುಂಬವರ್ಗದವರನ್ನು ಇಲ್ಲಿಗೆ ಕರೆಸಿದ್ದಾರೆ.
ಕುಟುಂಬ ವರ್ಗದವರನ್ನು ಪೊಲೀಸರು ಬಿಗಿ ಬಂದೋಬಸ್ತ್ನಲ್ಲಿ ಕರೆದೊಯ್ದರು. ಅವರು ನೀಡುವ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯ ಗುರುತನ್ನು ಇನ್ನಷ್ಟೇ ಬಹಿರಂಗ ಪಡಿಸಬೇಕಿದೆ.