ಉಡುಪಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ಕುಟುಂಬ 8 ತಿಂಗಳ ಹಿಂದೆ ಮಣಿಪಾಲದ ಮಣ್ಣಪಳ್ಳದಲ್ಲಿ ವಾಸವಿತ್ತು ಎಂಬ ವಿಚಾರ ತಿಳಿದು ಬಂದಿದೆ.
ಅನಾರೋಗ್ಯದಿಂದ ಕೆಲ ತಿಂಗಳುಗಳ ಹಿಂದಷ್ಟೆ ಆದಿತ್ಯನ ತಾಯಿ ತೀರಿಹೋದರು. ಬಳಿಕ ಆದಿತ್ಯ ರಾವ್ ಕುಟುಂಬ ಮಣ್ಣಪಳ್ಳದ ಮನೆ ಖಾಲಿ ಮಾಡಿ ಮಂಗಳೂರಿನಲ್ಲಿ ನೆಲೆಸಿತ್ತು ಎಂದು ನೆರೆಮನೆಯವರು ಮಾಹಿತಿ ನೀಡಿದರು.
ಆದಿತ್ಯ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಆದರೆ, ಅವರ ತಾಯಿ ಅನಾರೋಗ್ಯದ ವಿಚಾರವಾಗಿ ಆಗಾಗ ಮಾತನಾಡುತ್ತಿದ್ದರು ಎಂದು ನೆರೆಮನೆಯ ದಿವ್ಯಾ ಕಿಣಿ ಹಾಗೂ ಪೂರ್ಣಿಮಾ ತಿಳಿಸಿದರು.
ಈಚೆಗೆ ಮನೆಯಲ್ಲಿದ್ದ ಕಪಾಟು ಸೇರಿದಂತೆ ಕೆಲವು ವಸ್ತುಗಳನ್ನು ಮಂಗಳೂರಿಗೆ ಸಾಗಿಸಲಾಗಿದೆ. ಮನೆಯಲ್ಲಿ ಕೆಲವು ಗೃಹೋಪಯೋಗಿ ವಸ್ತುಗಳು ಮಾತ್ರ ಇವೆ. ಹೆಚ್ಚಾಗಿ ಯಾರೂ ಇಲ್ಲಿ ಉಳಿಯುತ್ತಿರಲಿಲ್ಲ ಎಂದು ಹೇಳಿದರು.
ಮನೆಯಲ್ಲಿ ಶೋಧ: ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದು ಆದಿತ್ಯ ರಾವ್ ಎಂಬ ಮಾಹಿತಿ ಸಿಗುತ್ತಿದ್ದಂತೆ ಈಚೆಗೆ ಮಂಗಳೂರಿನಿಂದ ಪೊಲೀಸರ ತಂಡ ಮಣಿಪಾಲದ ಆದಿತ್ಯ ರಾವ್ ನಿವಾಸಕ್ಕೆ ಭೇಟಿನೀಡಿ ಶೋಧ ನಡೆಸಿದೆ ಎಂದು ಮೂಲಗಳು ತಿಳಿಸಿವೆ.