ಮಂಗಳೂರು: ‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇದೇ 21 ರಂದು ಬಂಟ್ವಾಳ ಹಾಗೂ ಬೆಳ್ತಂಗಡಿಯಲ್ಲಿ ಹಾಗೂ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ 22 ರಂದು ಸುಳ್ಯ ಹಾಗೂ ಇನ್ನೊಂದು ಕಡೆ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಿಳಾ ಮೋರ್ಚಾ, ಪರಿಶಿಷ್ಟ ಜಾತಿ ಮೋರ್ಚಾ, ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದಲೂ ಪ್ರಚಾರ ಸಭೆಗಳನ್ನು ನಡೆಸಲಿದ್ದೇವೆ. ಇದೇ 19 ರಂದು ವಕೀಲರ ಸಭೆಯನ್ನು ಹಮ್ಮಿಕೊಂಡಿದ್ದು, ಪಕ್ಷದ ಮುಖಂಡ ಗೌರವ್ ಭಾಟಿಯಾ ಭಾಗವಹಿಸಲಿದ್ದಾರೆ’ ಎಂದರು.
ನನಗೂ ನೋವಾಗಿದೆ: ’ಪ್ರಧಾನಿ ನಗರಕ್ಕೆ ಬರುವಾಗ ಎದುರುಗೊಳ್ಳಲು ಮೇಯರ್ಗೆ ಅವಕಾಶ ಸಿಗದಿರುವುದು ನನಗೂ ನೋವಾಗಿದೆ. ಇದು ತಾಂತ್ರಿಕ ಕಾರಣದಿಂದಾಗಿ ಆದ ವ್ಯತ್ಯಾಸ. ಹೀಗೆ ಆಗಬಾರದಿತ್ತು’ ಎಂದು ಸತೀಶ್ ಕುಂಪಲ ಹೇಳಿದರು.
‘ಪ್ರಧಾನಿ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ಸಿಗದಿದ್ದರೆ ಜಿಲ್ಲಾ ಘಟಕದ ಅಧ್ಯಕ್ಷನಾದ ನಾನೂ ಹೊರಗೆ ನಿಲ್ಲಬೇಕಾಗುತ್ತದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರವಿ ಶಂಕರ್ ಮಿಜಾರ್, ನಿತಿನ್ ಕುಮಾರ್, ಪ್ರೇಮಾನಂದ ಶೆಟ್ಟಿ, ಸಂಜಯ ಪ್ರಭು, ಜಗದೀಶ ಶೇಣವ ಭಾಗವಹಿಸಿದ್ದರು.