ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನಪ್ರತಿನಿಧಿಯೊಬ್ಬರು ತಮ್ಮ ಸಹೋದರನ ಜೊತೆಗೆ ಸೇರಿ ಸರ್ಕಾರದ ನಿವೇಶನಕ್ಕೆ ಕಾದಿರಿಸಿದ ನಾಲ್ಕು ಎಕರೆ ಜಾಗದಲ್ಲಿ ಮಣ್ಣು ಅಕ್ರಮ ಸಾಗಾಣಿಕೆ ಮಾಡುತ್ತಿದ್ದು, ಈ ಬಗ್ಗೆ ಹಲವಾರು ಬಾರಿ ದೂರು ನೀಡಲಾಗಿದೆ. ತಹಶೀಲ್ದಾರರು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು, ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದರೂ, ಯಾವುದೇ ಕ್ರಮವಾಗಿಲ್ಲ. ಜಿಲ್ಲಾಧಿಕಾರಿ, ಭೂ ಮತ್ತು ಗಣಿ ಇಲಾಖೆಯ ರಾಜ್ಯ ನಿರ್ದೇಶಕರು ಭೂ ಮತ್ತು ಗಣಿ ಇಲಾಖೆ ಸಚಿವರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯ ಕೊಳ್ನಾಡು, ಪಜೀರು ಇನ್ನಿತರ ಪ್ರದೇಶಗಳ ಪರವಾನಗಿ ಇಟ್ಟುಕೊಂಡು ಕನ್ಯಾನ ಗ್ರಾಮದಿಂದ ದಿನಕ್ಕೆ ಸಾವಿರಾರು ಟನ್ ಕೆಂಪು ಮಣ್ಣು ಸಾಗಣೆ ಮಾಡಲಾಗುತ್ತಿದೆ ಎಂದರು.