ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಪುದುವೆಟ್ಟು ಗ್ರಾಮದಲ್ಲಿ ಮಂಗಳವಾರ ವಿಷಪೂರಿತ ಅಣಬೆ ಸೇವಿಸಿದ ಪರಿಣಾಮದಿಂದ ಇಬ್ಬರು ಸಾವನ್ನಪ್ಪಿದ್ದಾರೆ.
ಪುದುವೆಟ್ಟು ಗ್ರಾಮದ ಮಿಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ (75) ಮತ್ತು ಆತನ ಮಗ ಓಡಿ (45) ಸಾವನ್ನಪ್ಪಿದವರು.
ತೀರಾ ಬಡವನಾದ ಗುರುವ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿ ವಾಸ್ತವ್ಯ ಇದ್ದರು. ಮಂಗಳವಾರ ಮುಂಜಾನೆ ಗುರುವ ಮತ್ತು ಮಗ ಓಡಿಯ ಮೃತ ದೇಹ ಮನೆಯ ಅಂಗಳದಲ್ಲಿದ್ದವು.
ಸೋಮವಾರ ರಾತ್ರಿ ಕಾಡಿನ ವಿಷಪೂರಿತ ಅಣಬೆಯನ್ನು ಅಡುಗೆ ಮಾಡಿ ಸೇವಿಸಿರುವುದರಿಂದ ಅವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮತ್ತೊಬ್ಬ ಮಗ ಮನೆಯಲ್ಲಿ ಇಲ್ಲವಾದುದರಿಂದ ಆತ ಸಾವಿನಿಂದ ಪಾರಾಗಿದ್ದಾನೆ.
ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.