ಮಂಗಳೂರು: ಕೇರಳಕ್ಕೆ ನಿಷೇಧಿತ ಎಂಡಿಎಂಎ ಮಾತ್ರೆ ಅಕ್ರಮವಾಗಿ ಸಾಗಿಸುತ್ತಿದ್ದ ಉಪ್ಪಳದ ಮೂವರನ್ನು ಶುಕ್ರವಾರ ಕೊಣಾಜೆಯ ಗಣೇಶ್ ಮಹಲ್ನಲ್ಲಿ ಬಂಧಿಸಲಾಗಿದೆ.
ಉಪ್ಪಳ ಗೇಟ್ ನಿವಾಸಿ ಮೊಹಮ್ಮದ್ ಮುನಾಫ್, ಮೊಹಮ್ಮದ್ ಮುಝಾಂಬಿಲ್, ಅಹ್ಮದ್ ಮಸೂಕ್ ಬಂಧಿತರು. ಇವರಿಂದ ₹10 ಲಕ್ಷ ಮೌಲ್ಯದ 170 ಎಂಡಿಎಂಎ ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರಲ್ಲಿ ಮುನಾಫ್ ಬಿಬಿಎ ಓದಿದ್ದು , ಮುಝಾಂಬಿಲ್ ಬೆಂಗಳೂರಿನ ನೆಲಮಂಗಲ ಸ್ಪೋರ್ಟ್ಸ್ ಶಾಪ್ ನಲ್ಲಿ ಹಾಗೂ ಮಸೂಕ್ ಜೆ.ಪಿ.ನಗರದ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಗಳು ಬೆಂಗಳೂರಿನಲ್ಲಿ ಆಫ್ರಿಕನ್ ಪ್ರಜೆಯೊಬ್ಬರಿಂದ ಡ್ರಗ್ಸ್ ಪಡೆದು, ಅದನ್ನು ಮಂಗಳೂರು, ಉಪ್ಪಳ ಮತ್ತು ಕಾಸರಗೋಡಿನ ಪ್ರದೇಶಗಳಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಕೊಣಾಜೆ ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರಿಂದ ಮೊಬೈಲ್ ಪೋನ್, ಕಾರು ಸೇರಿ ಒಟ್ಟು ₹17,37,000 ಮೌಲ್ಯದ ವಸ್ತಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಮಾರಾಟ ಮಾಡುವ ಗ್ರಾಹಕರ ಬಗ್ಗೆಯೂ ವಿಸ್ತಾರವಾದ ತನಿಖೆ ನಡೆಸಲಾಗುತ್ತಿದೆ. ಕೆಲವರು ಬೆಂಗಳೂರಿನಲ್ಲಿ ಪೂರ್ಣ ಸಮಯದ ವ್ಯವಹಾರವಾಗಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದಾರೆ. ಆರೋಪಿಗಳಿಗೆ ಡ್ರಗ್ಸ್ ನೀಡಿದ ಆಫ್ರಿಕನ್ ಪ್ರಜೆಯನ್ನೂ ಬಂಧಿಸಲು ಬೆಂಗಳೂರು ಪೊಲೀಸರ ಸಹಾಯ ಪಡೆಯುತ್ತೇವೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.