ಮಂಗಳೂರು: ‘ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಸರ್ಕಾರ ಈಡೇರಿಸುವುದೂ ಇಲ್ಲ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಬುಧವಾರ ಮಾತನಾಡಿದ ಅವರು, ‘ಅವು (ಕೆಎಸ್ಆರ್ಟಿಸಿ) ನಿಗಮಗಳು. ಅಲ್ಲಿನ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡಿದರೆ, ಉಳಿದ ಎಲ್ಲರೂ ಕೇಳುತ್ತಾರೆ. ಅವರ ಬೇಡಿಕೆಯು ಶೇ 1ರಷ್ಟೂ ನ್ಯಾಯ ಬದ್ಧವಾಗಿಲ್ಲ’ ಎಂದರು.
‘ಇದೊಂದು ಕಾನೂನು ವಿರೋಧಿ ಹೋರಾಟ. ಅದನ್ನು ಹೇಗೆ ಬಗ್ಗುಬಡಿಯಬೇಕು ಎಂದು ಸರ್ಕಾರಕ್ಕೆ ಗೊತ್ತಿದೆ. ಮುಷ್ಕರ ಮುಂದುವರಿಸಿದರೆ, ಜನರೇ ತಿರುಗಿ ಬೀಳುತ್ತಾರೆ. ಜನರಿಗೆ ತೊಂದರೆಯಾದರೆ, ಸರ್ಕಾರ ಸುಮ್ಮನೆ ಕೂರುವುದಿಲ್ಲ’ ಎಂದೂ ಎಚ್ಚರಿಕೆ ನೀಡಿದರು.
‘ಕೋಡಿಹಳ್ಳಿ ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವದಲ್ಲಿ ನಡೆಯುವುದಿಲ್ಲ. ಅವರು ಕಾರ್ಮಿಕರ ಹಾದಿ ತಪ್ಪಿಸುವ ಜೊತೆಗೆ ರಾಜ್ಯದ ಅಭಿವೃದ್ಧಿ ಕುಂಠಿತ ಮಾಡುತ್ತಿದ್ದಾರೆ’ ಎಂದು ದೂರಿದರು.
‘ಕೋಡಿಹಳ್ಳಿ ನಾಯಕತ್ವ ಬಿಟ್ಟು ಬನ್ನಿ. ರಾಜ್ಯಕ್ಕೂ, ನಿಮಗೂ ಒಳ್ಳೆಯದಾಗುತ್ತದೆ’ ಎಂದು ಸಾರಿಗೆ ನೌಕರರಿಗೆ ಸಚಿವರು ಮನವಿ ಮಾಡಿದರು.