ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2008ರಿಂದ 2013ರವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಇದೇ ರೀತಿ ಆದೇಶ ಮಾಡಿದ್ದರು. ಬಿಪಿಎಲ್ ಕಾರ್ಡ್ಗೆ ಜನ ಅರ್ಜಿ ಸಲ್ಲಿಸಲು ಪರದಾಡುವ ಪರಿಸ್ಥಿತಿ ನಿರ್ಮಿಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಆಧಾರ್ ಕಾರ್ಡ್ ಇದ್ದವರಿಗೆ ರೇಷನ್ ಕಾರ್ಡ್ ಜಾರಿಗೊಳಿಸಿದ್ದು, ಹಕ್ಕಿಪಿಕ್ಕಿ ಜನಾಂಗ ಸೇರಿದಂತೆ ಅಲೆಮಾರಿಗಳಿಗೂ ಬಿಪಿಎಲ್ ಕಾರ್ಡ್ ದೊರೆಯುವಂತೆ ಮಾಡಿತ್ತು. ಈಗ ಮತ್ತೆ ಬಿಜೆಪಿ ಸರ್ಕಾರದ ಆಹಾರ ಸಚಿವರ ಹೇಳಿಕೆಯು ಜನಸಾಮಾನ್ಯರಿಗೆ ಮುಳುವಾಗಿದೆ. ಈಗಾಗಲೇ 7 ಕೆ.ಜಿ ಅಕ್ಕಿಯನ್ನು 5 ಕೆ.ಜಿಗೆ ಇಳಿಕೆ ಮಾಡಲಾಗಿದೆ. ಯೋಜನೆಗಳಲ್ಲಿ ಶೇ 5ರಷ್ಟು ತಪ್ಪು, ದುರುಪಯೋಗ ಉಂಟಾಗುತ್ತದೆ. ಅದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ಬಡವರಿಗೆ ಸಿಗುತ್ತಿರುವ ಪಡಿತರ ವ್ಯವಸ್ಥೆಯನ್ನೇ ಬಂದ್ ಮಾಡಲು ಮುಂದಾಗಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ’ ಎಂದರು.